ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ಮೈಸೂರು, ಅ.10: ರಾಷ್ಟ್ರಪತಿ ರಾಮನಾಥ ಕೋವಿಂದ್ ಎರಡು ದಿನಗಳ ಭೇಟಿಗಾಗಿ ಇಂದು ಸಂಜೆ ಮೈಸೂರಿಗೆ ಆಗಮಿಸಿದರು. ದೆಹಲಿಯಿಂದ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಪತ್ನಿ ಸಮೇತರಾಗಿ ಗುರುವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸಂಜೆ 5.40ಗಂಟೆಗೆ ಬಂದಿಳಿದರು.
ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲ ಪುಷ್ಪಗುಚ್ಚ ನೀಡುವ ಮೂಲಕ ಬರಮಾಡಿಕೊಂಡರು. ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೈಸೂರು ಪೇಟ ತೊಡಿಸಿ ಪುಷ್ಪಗುಚ್ಚ ನೀಡಿ ಸರಕಾರದ ವತಿಯಿಂದ ಸ್ವಾಗತ ಕೋರಿದರು.
ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ.ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿಲ್ಲಾಧಿಕಾರಿ ಅಭಿರಾಮ್.ಜಿ ಶಂಕರ್, ಉಪಸ್ಥಿತರಿದ್ದರು.
ಇಂದು ರಾತ್ರಿ ಅರಮನೆಯಲ್ಲಿ ಆಯೋಜಿಸಿರುವ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅ.11ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಶ್ರೀಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ. ನಂತರ ನಂಜನಗೂಡಿಗೆ ತೆರಳಿ ಶ್ರೀಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆಯುವರು.
ಸಂಜೆ 4 ಗಂಟೆಗೆ ವರುಣ ಬಳಿ ಜೆಎಸ್ಎಸ್ ಅಕಾಡೆಮಿ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದೇ ಸಂಜೆ 5.25 ಗಂಟೆಗೆ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್ಸಾಗುವರು.