ಯೆಲ್ಲೋ ಎಕ್ಸ್ಪ್ರೆಸ್ ಕಂಪೆನಿ ಮೇಲೆ ಸಿಐಡಿ ದಾಳಿ
ಬೆಂಗಳೂರು, ಅ.11: ವಂಚನೆ ಆರೋಪ ಕೇಳಿಬಂದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿರುವ ಯೆಲ್ಲೋ ಎಕ್ಸ್ಪ್ರೆಸ್ ಲಾಜಿಸ್ಟಿಕ್ ಕಂಪೆನಿಗಳ ಮೇಲೆ ಸಿಐಡಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇಲ್ಲಿನ ಮತ್ತಿಕೆರೆ ಮತ್ತು ನೆಲಮಂಗಲ ವ್ಯಾಪ್ತಿಯಲ್ಲಿರುವ ಕಂಪೆನಿಯ ಶಾಖಾ ಕಚೇರಿಗಳ ಮೇಲೆ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲಿಸಿದರು ಎಂದು ತಿಳಿದು ಬಂದಿದೆ.
ಯೆಲ್ಲೋ ಎಕ್ಸ್ಪ್ರೆಸ್ ಲಾಜಿಸ್ಟಿಕ್ ಹೆಸರಿನ ಕಂಪೆನಿ, ಸಾರ್ವಜನಿಕರಿಗೆ ವಂಚಿಸಿದೆ ಎನ್ನುವ ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರದ ಹಿಂದಿನ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಆದರೆ, ಕಾರ್ಯಾಚರಣೆ ನಡೆಸಿ ತಿಂಗಳಾದರೂ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದರು. ನಂತರ ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು ಎನ್ನಲಾಗಿತ್ತು.
ಯೆಲ್ಲೋ ಎಕ್ಸ್ಪ್ರೆಸ್ ಲಾಜಿಸ್ಟಿಕ್ ಕಂಪೆನಿ 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದೆಲ್ಲೆಡೆ ಹೂಡಿಕೆದಾರರಿದ್ದಾರೆ. ಈ ಕಂಪೆನಿಯು ಕಾರುಗಳನ್ನು ಗುತ್ತಿಗೆ ಯೋಜನೆಯ ಮೂಲಕ 2.50 ಲಕ್ಷ ರೂ. ಮುಂಗಡವಾಗಿ ಪಾವತಿಸಿಕೊಂಡು, ಹೂಡಿಕೆದಾರರ ಹೆಸರಿನಲ್ಲಿ ಕಾರನ್ನು ನೋಂದಾಯಿಸುತ್ತದೆ. ಅಲ್ಲದೆ, 4 ವರ್ಷದವರೆಗೆ ಹೂಡಿಕೆದಾರನಿಗೆ ಪ್ರತಿ ತಿಂಗಳು 10 ಸಾವಿರ, ಗುತ್ತಿಗೆ ಮುಗಿದ ನಂತರ 2.50 ಲಕ್ಷ ರೂ. ವಾಪಸ್ಸು ನೀಡುತ್ತದೆ. ಈಗಾಗಲೇ ಕಂಪೆನಿಗೆ 2 ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದಾರೆಂದು ವರದಿಯಾಗಿದೆ.