ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ, ಜನ್ಮಸ್ಥಳ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಯಡಿಯೂರಪ್ಪ
ಬೆಂಗಳೂರು, ಅ.23: ಬೆಳಗಾವಿ ಜಿಲ್ಲೆಯ ಬೈಲವಂಗಲದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಹಾಗೂ ಅವರ ಜನ್ಮಸ್ಥಳವಾದ ಕಾಕತಿಯನ್ನು ಸಮಗ್ರ ಅಭಿವೃದ್ಧಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತ್ಯುತ್ಸವ ಅಂಗವಾಗಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೈಲವಂಗಲವದಲ್ಲಿರುವ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಹೆಚ್ಚಿನ ಘೋಷಣೆ ಮಾಡುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಗೌರವ ಸಲ್ಲಿಸಲು ಅಗತ್ಯವಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಸಾಹಸಗಳು ಇಂದಿಗೂ ಮನೆ ಮಾತಾಗಿದೆ ಎಂದು ಅವರು ಹೇಳಿದರು.
ಕೂಡಲ ಸಂಗಮ ಮಹಾಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮಿ ಮಾತನಾಡಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮನವರ ಹೆಸರು ನಾಮಕರಣ ಮಾಡಬೇಕು. ಇಂಗ್ಲೆಂಡ್ನ ಬ್ರಿಟಿಷ್ ಲೈಬ್ರರಿಯಲ್ಲಿರುವ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ಘಟಕ ಮತ್ತು ಕ್ರಾಂತೀರ ಸಂಗೋಳ್ಳಿ ರಾಯಣ್ಣರವರ ಖಡ್ಗಗಳನ್ನು ಮರಳಿ ಕರ್ನಾಟಕಕ್ಕೆ ತರಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮುಂದಿನ ವರ್ಷದಿಂದ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದವರೆಗೆ ಚೆನ್ನಮ್ಮನವರ ಜಯಂತಿಯನ್ನು ಆಚರಿಸಬೇಕು. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವೆಂದು ಹಾಗೂ ರಾಣಿ ಚೆನ್ನಮ್ಮ ಹೆಸರನ್ನು ಮಹಿಳಾ ಸಬಲೀಕರಣ ಯೋಜನೆಗೆ ನಾಮಕರಣ ಮಾಡಬೇಕು. ಸಬಲೀಕರಣ ಯೋಜನೆಗಾಗಿ ಚೆನ್ನಮ್ಮ ಹೆಸರಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ಭವನ ನಿರ್ಮಾಣ ಮಾಡಬೇಕೆಂದು ಅವರು ಒತ್ತಾಯಿಸಿದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಅವರ ಹೆಸರಿಗೆ ಜಾತಿ ಬಣ್ಣ ಕಟ್ಟಬಾರದು. ದೆಹಲಿಯಲ್ಲಿ ಅ.23 ರಂದು ಪ್ರತಿವರ್ಷ ಜಯಂತ್ಯುತ್ಸವ ಆಚರಿಸಬೇಕು. ಸಂಸತ್ ಭವನದಲ್ಲಿರುವ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಪ್ರತಿವರ್ಷ ಸರಕಾರದಿಂದ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅನರ್ಹರನ್ನು ಆಯ್ಕೆ ಮಾಡಬಾರದು. ನೀರಿನಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವವರನ್ನು, ಅಪಘಾತಕ್ಕೊಳಗಾಗಿ ಅಸಹಾಯಕ ಸ್ಥಿತಿಯಲ್ಲಿರುವವರನ್ನು ಕಾಪಾಡಿದ ಮಹಿಳೆಯೊಬ್ಬರಿಗೆ ಈ ಪ್ರಶಸ್ತಿ ನೀಡಬೇಕು. ಯಾರು ಸಿಗದಿದ್ದರೆ, ಪ್ರಶಸ್ತಿಯನ್ನು ಕೊಡುವುದೇ ಬೇಡ. ಕೇವಲ ಕಾಗದ ಪತ್ರಗಳನ್ನು ತಂದವರಿಗೆಲ್ಲಾ ಪ್ರಶಸ್ತಿ ನೀಡುವುದು ಕಿತ್ತೂರು ರಾಣಿ ಚೆನ್ನಮ್ಮನಿಗೆ ಮಾಡಿದ ಅವಮಾನದಂತೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮೇಯರ್ ಎಂ. ಗೌತಮ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಸ್ವಾಗತಿಸಿದರು.