ಜನನ ಮರಣ ನೋಂದಣಿಗಳು ಕ್ರಮಬದ್ಧವಾಗಿರಲಿ: ಜಿಲ್ಲಾಧಿಕಾರಿ ಸಿಂಧೂ ರೂಪೇಶ್
ಮಂಗಳೂರು, ಅ.24: ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯು ಕ್ರಮಬದ್ಧವಾಗಿ ನಡೆಯುತ್ತಿರಬೇಕು. ಮಾರ್ಗಸೂಚಿಗಳ ಅನ್ವಯ ಸಂಬಂಧಪಟ್ಟ ನೋಂದಣಾಧಿಕಾರಿಗಳು ಸಕಾಲಕ್ಕೆ ಸಾರ್ವಜನಿಕರಿಗೆ ಸ್ಪಂದಿಸಿ, ನೋಂದಣಿ ಕಾರ್ಯಗಳನ್ನು ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕೋರ್ಟ್ಹಾಲ್ ನಲ್ಲಿ ಗುರುವಾರ ನಡೆದ ಜನನ ಮರಣ ನೋಂದಣಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತಾಡಿದರು.
ಗ್ರಾಮೀಣ ಪ್ರದೇಶ, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ನೋಂದಣಾಧಿಕಾರಿಗಳು ಜನನ ಮರಣ ನೋಂದಣಿಯನ್ನು ನಿಯಮನುಸಾರವಾಗಿ ನಡೆಸುತ್ತಿರಬೇಕು ಎಂದು ಸಿಂಧೂ ಸೂಚಿಸಿದರು.
ಗ್ರಾಮಾಂತರ ಹಾಗೂ ನಗರಗಳ ಸಹಿತ ಜಿಲ್ಲೆಯಲ್ಲಿ 456 ನೋಂದಣಿ ಘಟಕಗಳು ಇವೆ. ಜಿಲ್ಲೆಯಲ್ಲಿ 26,423 ಜನನ ಮತ್ತು 14,904 ಮರಣ ನೋಂದಣಿಗಳು ದಾಖಲಾಗಿವೆ ಎಂದು ಸಾಂಖ್ಯಿಕ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಮನಮೋಹನ್ ಮಾಹಿತಿ ನೀಡಿದರು.
2019ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 313 ಜನನ ಮತ್ತು 398 ಮರಣ ತಡ ನೋಂದಣಿಗಳು ದಾಖಲಾಗಿದೆ. ಸೆಕ್ಷನ್ 13ರ ಅನ್ವಯ ಘಟನೆ ಸಂಭವಿಸಿದ 21 ದಿನದ ನಂತರದ ಘಟನೆಗಳನ್ನು ತಡ ನೋಂದಣಿ ಮಾಡಬಹುದಾಗಿದ್ದು, ತಡನೋಂದಣಿಗಳು ಕಡಿಮೆಗೊಳಿಸಲು ಸೂಕ್ತ ಕ್ರಮ ವಹಿಸುವುದು ಇದರ ಉದ್ದೇಶವಾಗಿದೆ. ಸೆಕ್ಷನ್ 18ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇ.100ರಷ್ಟು ಘಟನೆಗಳು ದಾಖಲಾತಿಯಾಗಿರುವ ಕುರಿತು ಕಂದಾಯ, ನಗರಾಭಿವೃದ್ಧಿ, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ ಎಂದು ಮನಮೋಹನ್ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಎ.ಡಿ. ಬೋಪಯ್ಯ, ಮಾರುತಿ ಪ್ರಸಾದ್, ರತ್ನಾಕರ್ ಮತ್ತಿತರರು ಉಪಸ್ಥಿತರಿದ್ದರು.