ಐದು ವರ್ಷದಲ್ಲಿ ಆದ ಅಭಿವೃದ್ಧಿ ಕಾಂಗ್ರೆಸ್ಗೆ ಶ್ರೀರಕ್ಷೆ : ಮೊಯ್ದಿನ್ ಬಾವಾ
ಕೂಳೂರು, ಅ.24: ಕಳೆದ ಐದು ವರ್ಷಗಳಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯವಾಗಿದ್ದು, ಮನಪಾದ ಈ ಉತ್ತಮ ಆಡಳಿತವೇ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದ್ದಾರೆ.
ಗುರುವಾರ ಕೂಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅ.25ರಂದು ಸಂಜೆ 5 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 23 ವಾರ್ಡ್ ಇದ್ದು ಅತ್ಯುತ್ತಮ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡಲಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ನನ್ನ ಶಾಶಕತ್ವದ ಅವಧಿಯಲ್ಲಿ ಹಾಗೂ ಪಾಲಿಕೆ ವತಿಯಿಂದ 13ನೇ ಹಣಕಾಸು ಯೋಜನೆಯಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ವಿಶೇಷ ಅನುದಾನದಿಂದ ಕೋಟ್ಯಂತರ ರೂಪಾಯಿಯ ಅಭಿವೃದ್ಧಿ ಕಾರ್ಯಗಳಾಗಿದೆ ಎಂದರು.
ಸುರತ್ಕಲ್ ಮಾರುಕಟ್ಟೆಗೆ 62 ಕೋ.ರೂ., ಸುರತ್ಕಲ್ ಪಾಲಿಕೆಯ ಉಪಕಚೇರಿ ನಿರ್ಮಾಣ, ಸುರತ್ಕಲ್-ಬಜಪೆ ರಸ್ತೆ ಅಗಲೀಕರಣ, ವಾರ್ಡ್ ಮಟ್ಟದಲ್ಲಿ ಮಾರುಕಟ್ಟೆಗಳು, ಒಳ ರಸ್ತೆಗಳ ಕಾಂಕ್ರಿ ಟೀಕರಣ, ಒಳಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆಯಾಗಿ ಇದೀಗ ಕಾಮಗಾರಿ ನಡೆಯುತ್ತಿದೆ. ಸುರತ್ಕಲ್ ಬಜಪೆ ರಸ್ತೆ 58 ಕೋ.ರೂ.ನಲ್ಲಿ ಟೆಂಡರ್ ಆಗಿ ಕಾಮಗಾರಿ ಭಾಗಶಃ ಮುಗಿದು ಹೋಗುತ್ತಿತ್ತು. ಆದರೆ ಹಾಲಿ ಶಾಸಕರು ಇಚ್ಛಾಶಕ್ತಿ ತೋರದ ಕಾರಣ ಇದುವರೆಗೂ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.
ಪಾಲಿಕೆ ಟಿಕೆಟ್ಗೆ ಪೈಪೋಟಿ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಹೀಗಾಗಿ ಸ್ಪರ್ಧೆ ಸಹಜ. ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸುರತ್ಕಲ್ ಮಾರುಕಟ್ಟೆ ಪೂರ್ಣಮಾಡುವ ಭರವಸೆ ನೀಡುತ್ತೇವೆ. ಒಳಚರಂಡಿ ಸಮರ್ಪಕವಾಗಿ ನೀಡುತ್ತೇವೆ. ಕುಡಿಯುವ ನೀರನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಕೊರತೆ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ಹಾರಿಸ್ ಬೈಕಂಪಾಡಿ ಉಪಸ್ಥಿತರಿದ್ದರು.