ಅಫ್ಫಾನ್ ಕೊಲೆ ಪ್ರಕರಣದ ಆರೋಪಿ ಮಂಗಳೂರಿನಲ್ಲಿ ಸೆರೆ : ಬಂಧಿತರ ಸಂಖ್ಯೆ 3ಕ್ಕೆ ಏರಿಕೆ
ಭಟ್ಕಳ: ತಾಲೂಕಿನ ಪುರವರ್ಗದ ನಿವಾಸಿ ಅಫ್ಫಾನ್ ಕೊಲೆ ಪ್ರಕರಣದ ತನಿಖೆ ಇನ್ನಷ್ಟು ಚುರುಕು ಪಡೆದುಕೊಂಡಿದ್ದು, ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಬಂಧಿತನನ್ನು ಮಂಗಳೂರಿನ ಮುಷರಫ್ ಎಂದು ಹೆಸರಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆ ಇದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತ ಪುರವರ್ಗದ ಇಕ್ಬಾಲ್ ಸೇರಿದಂತೆ ಒಟ್ಟೂ 6 ಜನರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಗುರುವಾರ ಬಂಧಿತನಾಗಿದ್ದ ಮಂಗಳೂರು ಬಂಟ್ವಾಳದ ಸಿರಾಜ್ನ ವಿಚಾರಣೆಯಿಂದ ಕೊಲೆಯ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಪೊಲೀಸರಿಗೆ ಸಿಕ್ಕಿದ್ದು, ಇನ್ನೂ ಮೂವರನ್ನು ಬಂಧಿಸುವ ಕೆಲಸವಷ್ಟೇ ಬಾಕಿ ಉಳಿದಿದೆ. ಉಳಿದ ಮೂವರು ಆರೋಪಿಗಳು ಮಂಗಳೂರಿನಲ್ಲಿಯೇ ತಲೆ ಮರೆಸಿಕೊಂಡಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಟ್ಕಳ ಪೊಲೀಸರು ಮಂಗಳೂರಿನಲ್ಲಿ ಶೋಧ ಮುಂದುವರೆಸಿದ್ದಾರೆ ಎನ್ನಲಾಗಿದೆ.