ಬೊರಿಮಾರ್ ಚರ್ಚ್ನಲ್ಲಿ "ಸಮುದಾಯದ ದಿನಾಚರಣೆ"
ಬಂಟ್ವಾಳ, ಅ. 25: ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಇತ್ತೀಚೆಗೆ ಬೊರಿಮಾರ್ ಸಂತ ಜೋಸೆಫರ ಚರ್ಚ್ನಲ್ಲಿ ಸಮುದಾಯದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಭೇಟಿ ನೀಡಿ ಸಮುದಾಯದ ದಿನ ಆಚರಣೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು.
ಪರಸ್ಪರ ಪ್ರೀತಿ, ವಿಶ್ವಾಸ, ತ್ಯಾಗಮಯ ಜೀವನವನ್ನು ನಡೆಸುವ ಸಂತ ಜೋಸೆಫರಿಗೆ ಸಮರ್ಪಿತ ದೇವಾಲಯ ಬೊರಿಮಾರ್ ಧರ್ಮ ಕೇಂದ್ರದ ಎಲ್ಲ ಕ್ರೈಸ್ತ ಪ್ರಜೆಗಳನ್ನು ಅವರು ಅಬಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೊಗರ್ನಾಡ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ದೀಪಕ್ ಲೀಯೊ ಡೇಸಾ ಅವರು ಮಾತನಾಡಿ, ಬೊರಿಮಾರ್ ಧರ್ಮ ಕೇಂದ್ರ ಅತೀ ಸಣ್ಣದಾದರೂ ಶತಮಾನೋತ್ತರ ಬೆಳ್ಳಿ ಹಬ್ಬದ ಅಂಗವಾಗಿ ವರ್ಷವಿಡೀ ಆಚರಿಸಿದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದರು.
ಧರ್ಮ ಕೇಂದ್ರದ ಎಲ್ಲ ಭಕ್ತಾದಿಗಳಿಗೆ ಶತಮಾನೋತ್ತರ ಬೆಳ್ಳಿ ಹಬ್ಬದ ಸವಿ ನೆನಪಿಗೆ ನೆನಪಿನ ಕಾಣಿಕೆ ಹಾಗೂ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಈ ಮೊದಲು ಸೇವೆ ಸಲ್ಲಿಸಿದ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಯವರಿಗೆ ಸನ್ಮಾನಿಸಲಾಯಿತು. ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಮತ್ತು ಫಾದರ್ ದೀಪಕ್ ಡೇಸಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಪ್ರೀತಿ ಪಿರೇರಾ, ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು. ಚರ್ಚ್ನ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಸ್ವಾಗತಿಸಿದರು. ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ವಂದಿಸಿದರು. ರೀಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.