ಎಸ್ಸಿ, ಎಸ್ಟಿ ಕಾಲನಿ ರಸ್ತೆ ನಿರ್ಮಾಣಕ್ಕೆ 6.59 ಕೋ.ರೂ.: ಸಂಜೀವ ಮಠಂದೂರು
ಉಪ್ಪಿನಂಗಡಿ: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 4.65 ಕೋ. ರೂ. ಮತ್ತು ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ 1.94 ಕೋ.ರೂ. ಸೇರಿದಂತೆ ಒಟ್ಟು 6.59 ಕೋ.ರೂ. ಅನುದಾನವನ್ನು ರಾಜ್ಯ ಸರಕಾರ ಲೋಕೋಪ ಯೋಗಿ ಇಲಾಖೆಯ ಮೂಲಕ ಮಂಜೂರು ಮಾಡಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠ-ಕುಂಟಿನಿ ಪರಿಶಿಷ್ಟ ಜಾತಿ ಕಾಲನಿ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಬಂದಿರುವ ಈ ಅನುದಾನವನ್ನು ಪ್ರತೀ ಗ್ರಾಮ ಪಂಚಾಯತ್ನ ಪರಿಶಿಷ್ಠ ಜಾತಿ ಮತ್ತು ಪಂಗಡದ ಕಾಲನಿಯ ರಸ್ತೆ ಅಭಿವೃದ್ಧಿಗೆ ಕನಿಷ್ಠ ತಲಾ 10 ಲಕ್ಷ ರೂಪಾಯಿಯಂತೆ ವಿಂಗಡಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ಪೈಕಿ ಉಪ್ಪಿನಂಗಡಿ-ಮಠ-ಕುಂಟಿನಿ ರಸ್ತೆಗೆ 10 ಲಕ್ಷ ರೂಪಾಯಿ, ಹಿರೇಬಂಡಾಡಿಯ ಕೋಡಿಯಡ್ಕ ಪರಿಶಿಷ್ಠ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂಪಾಯಿ, ಹಿರೇಬಂಡಾಡಿ ಶಾಖೆಪುರ ಸರೋಳಿ ಪರಿಶಿಷ್ಠ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂಪಾಯಿ, ಬಜತ್ತೂರು ಗ್ರಾಮದ ಎಂಜಿರಡ್ಕ ಕೆದು ಪರಿಶಿಷ್ಠ ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ ರೂಪಾಯಿ, 34-ನೆಕ್ಕಿಲಾಡಿ ಸುಭಾಶ್ ನಗರ ಪರಿಶಿಷ್ಠ ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗಿದೆ. ಇವುಗಳ ಶಿಲಾನ್ಯಾಸ ಕಾರ್ಯಕ್ರಮ ಈಗಾಗಲೇ ನಡೆಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ವಿಶೇಷ ಅನುದಾನವಾಗಿ ಪುತ್ತೂರು ಕ್ಷೇತ್ರಕ್ಕೆ 25 ಕೋಟಿ ರೂಪಾಯಿ ಮಂಜೂರು ಆಗಿದ್ದು, ಇದನ್ನು ಕ್ಷೇತ್ರದ ಪ್ರತೀ ಗ್ರಾಮ ಪಂಚಾಯತ್ಗೆ 50 ಲಕ್ಷ ರೂಪಾಯಿಯಂತೆ ವಿಂಗಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ ಅವರು, ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳಿಗೆ ಅದರಲ್ಲೂ ಕಾಂಕ್ರಿಟೀಕರಣ ಆಗುವ ಸಂದರ್ಭಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಮತ್ತು ಅವುಗಳು ಕಳಪೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪರವರು ಬಹಳಷ್ಟು ಜನಪರ ಯೋಜನೆಗಳನ್ನು ರೂಪಿಸಿದ್ದು, ಅದರ ಸಲುವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಾರಂಭಿಸಿದೆ. ಜನತೆಗೆ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಯನಾ ಜಯಾನಂದ ಸಂದರ್ಭೋಚಿತವಾಗಿ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಲಲಿತ, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಸದಸ್ಯರಾದ ಸುನಿಲ್ ಕುಮಾರ್ ದಡ್ಡು, ಉಮೇಶ್ ಗೌಡ, ಚಂದ್ರಶೇಖರ ಮಡಿವಾಳ, ರಮೇಶ್ ಬಂಡಾರಿ, ಸ್ಥಳೀಯರಾದ ಸುಬ್ರಾಯ ನಾಯ್ಕ್, ಗಣೇಶ್, ನಾಸಿರ್ ಮಠ, ಶ್ರೀಮತಿ ಉಷಾ ಮುಳಿಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಾರಾಂ, ಸಹಾಯಕ ಇಂಜಿನಿಯರ್ ರವಿಚಂದ್ರ, ಸಿಬ್ಬಂದಿ ವಾಸು ನಾಯ್ಕ್ ಉಪಸ್ಥಿತರಿದ್ದರು.