ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದ ಶವ
ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ವಿರುದ್ಧ ಆಕ್ರೋಶ-ಪ್ರತಿಭಟನೆ
ಮಂಗಳೂರು, ಅ.27: ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾದ ಮೃತದೇಹ ಸಂಪೂರ್ಣ ಕೊಳೆತು ಹೋದ ಹಿನ್ನೆಲೆಯಲ್ಲಿ ಮೃತ ಯುವಕನ ಕುಟುಂಬಸ್ಥರು, ಸಾರ್ವಜನಿಕರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ರವಿವಾರ ನಡೆದಿದೆ.
ತೊಕ್ಕೊಟ್ಟು ಸಮೀಪದ ನಿತ್ಯಾಧರ್ ಸೈಟ್ ನಿವಾಸಿ ವಿಲ್ಸನ್ ಫೆರ್ನಾಂಡಿಸ್ ಎಂಬವರು ಶುಕ್ರವಾರ ವಿದ್ಯುತ್ ಅವಘಡದಲ್ಲಿ ಮೃತಪಟ್ಟಿದ್ದರು. ಬಳಿಕ ವಿಲ್ಸನ್ರ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ರವಿವಾರ ಮೃತದೇಹದ ಅಂತ್ಯಕ್ರಿಯೆ ನಡೆಯಲು ಸಿದ್ಧತೆ ನಡೆದಿತ್ತು. ಅದರಂತೆ ಕುಟುಂಬಸ್ಥರು ಮೃತದೇಹ ಕೊಂಡೊಯ್ಯಲು ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ ವೇಳೆ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಇದರಿಂದ ಆಕ್ರೋಶಗೊಂಡ ವಿಲ್ಸನ್ರ ಪೋಷಕರು, ಹಿತೈಷಿಗಳು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ ನೀಡಿ, ಅಹವಾಲು ಆಲಿಸಿದರು. ಎಸಿಪಿ ಕೋದಂಡರಾಮ, ಉಳ್ಳಾಲ ಪಿಐ ಗೋಪಿಕೃಷ್ಣ ಅವರು ಬಂದೋಬಸ್ತ್ ಏರ್ಪಡಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿದರು.