ನಿರಾಶ್ರಿತರೊಂದಿಗೆ ಡಿಸಿಎಂ ಗೋವಿಂದ ಕಾರಜೋಳ ದೀಪಾವಳಿ ಹಬ್ಬ ಆಚರಣೆ
ಬೆಂಗಳೂರು. ಅ. 28: ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ನಿರಾಶ್ರಿತರೊಂದಿಗೆ ಸಿಹಿ ಹಂಚುವ ಮೂಲಕ ಸೋಮವಾರ ದೀಪಾವಳಿ ಹಬ್ಬವನ್ನು ಆಚರಿಸಿದರು.
ಇಲ್ಲಿನ ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ನಿರಾಶ್ರಿತರು ಒಂಟಿಯಾಗಿದ್ದಾರೆ. ಅವರೊಂದಿಗೆ ಹಬ್ಬ ಆಚರಿಸಿ ಅವರ ಅಹವಾಲುಗಳನ್ನು ಆಲಿಸಿ, ಪರಿಹರಿಸುವ ಹಿನ್ನೆಲೆಯಲ್ಲಿ ಈ ಕೇಂದ್ರದಲ್ಲಿ ನಿರಾಶ್ರಿತರೊಂದಿಗೆ ಹಬ್ಬ ಆಚರಿಸಿದೆ ಎಂದರು.
ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗಾಗಿದ್ದು, ಸಮಾಜದ ಕಟ್ಟಕಡೆಯ ಮನುಷ್ಯರಿಗೆ, ಆರೈಕೆ ಮಾಡಲು ಯಾರೂ ಇಲ್ಲದ ಸಂದರ್ಭದಲ್ಲಿ ಈ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿ, ಆರೈಕೆ ಮಾಡಲಾಗುತ್ತಿದೆ. ಪ್ರಸ್ತುತವಾಗಿ ಈ ಕೇಂದ್ರದಲ್ಲಿ ಒಟ್ಟು 754 ನಿರಾಶ್ರಿತರಿದ್ದಾರೆ.
ನಿರಾಶ್ರಿತರಿಗೆ ಬ್ಯಾಂಕ್ ಖಾತೆ: ರಾಜ್ಯದ 14 ನಿರಾಶ್ರಿತರ ಕೇಂದ್ರಗಳಲ್ಲಿ 1250 ನಿರಾಶ್ರಿತರಿದ್ದಾರೆ. ಈ ಕೇಂದ್ರದಲ್ಲಿ ಕೃಷಿ, ಹೈನುಗಾರಿಕೆ ಸೇರಿ ವಿವಿಧ ತರಬೇತಿ ನೀಡಲಾಗುತ್ತಿದ್ದು, ಉದ್ಯೋಗಕ್ಕೆ ಹೋಗುವವರಿಗೆ ನೆರವು ನೀಡಲಾಗುವುದು. ಈ ಕೇಂದ್ರದಲ್ಲಿ ಕೆಲಸ ಮಾಡುವ ನಿರಾಶ್ರಿತರಿಗೆ ಬ್ಯಾಂಕ್ ಖಾತೆಯನ್ನು ತೆರೆಸಿ, ನವೆಂಬರ್ ತಿಂಗಳಿನಿಂದ ಕೆಲಸ ಮಾಡಿದ ದಿನ 75ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗಿದೆ ಎಂದರು.
ಜಯಚಾಮರಾಜೇಂದ್ರ ಒಡೆಯರ್ ಅವರು 1946ರಲ್ಲಿ ಪ್ರಾರಂಭಿಸಿದ ಈ ಕೇಂದ್ರವು 126 ಎಕರೆ ಹಾಗೂ 30 ಎಕರೆ ಜಮೀನಿನ ವಿಸ್ತೀರ್ಣದಲ್ಲಿದೆ. ಯಾವುದೇ ಭೂಗಳ್ಳರಿಗೆ ಈ ನಿವೇಶನವನ್ನು ಒತ್ತುವರಿ ಮಾಡಲು ಬಿಡುವುದಿಲ್ಲ. ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಸೆಸ್ ಅನುದಾನದಲ್ಲಿ ಈ ಕೇಂದ್ರಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬಿಬಿಎಂಪಿ 114 ಕೋಟಿ ರೂ., ಗ್ರಾ.ಪಂ.ಗಳು 17 ಕೋಟಿ ರೂ.ಗಳನ್ನು ಪಾವತಿಸಿವೆ.
ಬಿಬಿಎಂಪಿ ಇನ್ನೂ 164 ಕೋಟಿ ರೂ.ಅನ್ನು ಪಾವತಿಸಬೇಕಿದೆ. ಶೀಘ್ರವಾಗಿ ಪಾವತಿಸುವಂತೆ ಪತ್ರ ಬರೆಯಲಾಗುತ್ತಿದೆ. ಈ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಿರಾಶ್ರಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ತಾವು ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಈ ನಿರಾಶ್ರಿತರ ಪರಿಹಾರ ಕೇಂದ್ರ ದುಸ್ಥಿತಿಯಲ್ಲಿತ್ತು. ಇದನ್ನು ಅಭಿವೃದ್ಧಿಪಡಿಸಿ, ನಿರಾಶ್ರಿತರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಂತೆ ಕ್ರಮಕೈಗೊಳ್ಳಲಾಗಿತ್ತು. ಇಂದು ಈ ಕೇಂದ್ರವು ಅತ್ಯುತ್ತವುವಾಗಿದೆ ಎಂದು ಅವರು ಸ್ಮರಿಸಿದರು.
ಬೆಳಗಾವಿ ಜಿಲ್ಲೆಯ ಮಮದಾಪುರ ಗ್ರಾಮದ ನಿರಾಶ್ರಿತರೊಬ್ಬರು ತನ್ನ ಗ್ರಾಮಕ್ಕೆ ಹೋಗುವುದಾಗಿ ಅಳಲನ್ನು ತೋಡಿಕೊಂಡರು. ಡಿಸಿಎಂ ಕಾರಜೋಳ ಅವರು ಮಮದಾಪುರ ಪೊಲೀಸ್ ಠಾಣೆಯ ಸನ್ ಇನ್ಸ್ಪೆಕ್ಟರ್ ಹಾಗೂ ಬೆಳಗಾವಿ ವಲಯದ ಐಜಿಪಿ ಅವರಿಗೆ ದೂರವಾಣಿ ಕರೆ ಮಾಡಿ, ಈ ಮಹಿಳೆಯನ್ನು ಅವರ ಊರಿಗೆ ಕಳುಹಿಸಲು ಕ್ರಮಕೈಗೊಳ್ಳಬೇಕು. ಯಾರೂ ಸಂಬಂಧಿಕರು ದೊರಕದಿದ್ದರೆ ಬೆಳಗಾವಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಿದರು.
ಭೋಜನಾಲಯ, ಅಡಿಗೆ ಕೊಣೆ, ವಸತಿ ಕೊಠಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ನೀರಿನ ಘಟಕ, ಕೇಂದ್ರವು ನಿರ್ವಹಿಸುತ್ತಿರುವ ತೋಟ, ಹೈನುಗಾರಿಕೆ ಸ್ಥಳಗಳನ್ನು ಪರಿಶೀಲಿಸಿದರು. ಇದೇ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಬಾಬು ಜಗಜೀವನ ರಾಂ ಸಂಶೋಧನಾ ಹಾಗೂ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿ ಪರಿಶೀಲಿಸಿದರು.
ಈ ಕಾಮಗಾರಿಯನ್ನು ಶೀಘ್ರವಾಗಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಪೆದ್ದಪ್ಪ, ವಸತಿ ಶಾಲೆ ಸಂಸ್ಥೆಗಳ ಕಾರ್ಯ ನಿರ್ವಾಹಕ ಅಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.