ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಡೆಸಿದಲ್ಲಿ ಡೀಸೆಲ್ ಸಬ್ಸಿಡಿ ಕಡಿತಗೊಳಿಸಿ: ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಉಡುಪಿ, ಅ.30: ಬುಲ್ ಟ್ರಾಲ್ ಮತ್ತು ಬೆಳಕು ಮೀನುಗಾರಿಗೆ ನಡೆಸುವ ಬೋಟ್ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಜಿಲ್ಲಾಭಿವೃದ್ಧಿ, ಮರಳು ಸಮಸ್ಯೆ ಹಾಗೂ ನೆರೆ ಪರಿಹಾರಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸರಕಾರ ಬುಲ್ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿ ದ್ದರೂ ಸಹ ಇವುಗಳನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದ ಮಹೇಶ್ವರ ರಾವ್, ನಿಷೇಧ ಉಲ್ಲಂಘಿಸುವ ಬೋಟ್ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಸೂಚಿಸಿದರು.
ಇಂತಹ ಬೋಟ್ ಮಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಅತೀ ಹೆಚ್ಚಿನ ದಂಡ ವಿಧಿಸುವ, ಲೈಸೆನ್ಸ್ ರದ್ದುಗೊಳಿಸುವ ಕುರಿತಂತೆ ಕರ್ನಾಟಕ ಮರೈನ್ ಫಿಷಿಂಗ್ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ ಹಾಗೂ ಇವುಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂಡ ರಚಿಸುವ ಕುರಿತಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಬೆಳಕು ಮೀನುಗಾರಿಕೆ ತಡೆಯುವ ನಿಟ್ಟಿನಲ್ಲಿ ಬಂದರು ದ್ವಾರದಲ್ಲೇ ಜನರೇಟರ್ ತೆಗೆದುಕೊಂಡು ಹೋಗುವುದನ್ನು ತಡೆಯುವಂತೆ ಹಾಗೂ ಈ ಬಗ್ಗೆ ಪೊಲೀಸ್ ಇಲಾಖೆಯ ನೆರವು ಪಡೆಯುವಂತೆ ಸೂಚಿಸಿದ ರಾವ್, ಮೀನುಗಾರಿಕೆ ತೆರಳುವವರ ಸರಿಯಾದ ಮಾಹಿತಿ ಹೊಂದುವ ನಿಟ್ಟಿನಲ್ಲಿ ಡೀಸೆಲ್ ಬಂಕ್ನಲ್ಲಿಯೇ ಬೋಟ್ನಲ್ಲಿ ತೆರಳುವವರ ಸಂಪೂರ್ಣ ವಿವರ ಪಡೆಯುವಂತೆ ಹಾಗೂ ಸಮುದ್ರದಲ್ಲಿ ಬೋಟ್ಗಳ ಇರವನ್ನು ಪತ್ತೆ ಹಚ್ಚುವ ಕುರಿತಂತೆಬೋಟ್ ಟ್ರಾಕಿಂಗ್ ಸಿಸ್ಟಂನ್ನು ಎಲ್ಲಾ ಬೋಟ್ಗಳಲ್ಲಿ ಅಳವಡಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಉದ್ಯೋಗ, ಮಹಿಳೆಯರ ಹಾಸ್ಟೆಲ್ ನಿರ್ಮಾಣ ಕುರಿತಂತೆ ಅದರ ಅಗತ್ಯತೆ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ತಿಳಿಸಿದ ಕಾರ್ಯದರ್ಶಿ, ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ತಾಯಂದಿರ ಮಾಹಿತಿ ಸಂಗ್ರಹಿಸಿ, ನಿಯಮಿತವಾಗಿ ಅವರ ತಪಾಸಣೆ ನಡೆಸಿ, ಅವರಲ್ಲಿ ಅಪೌಷ್ಠಿಕತೆಯನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ, ಅಲ್ಲದೇ ಮಹಿಳಾ ಮಕ್ಕಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಬೆಳೆಗಳಾದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃಧ್ದಿಗೊಳಿಸಿ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಕಾರ್ಯದರ್ಶಿ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ, ಕಳೆದ ಬಾರಿ ಟ್ಯಾಂಕರ್ ನಲ್ಲಿ ನೀರು ನೀಡಿರುವ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಈ ಬಾರಿ ಮತ್ತೆ ಟ್ಯಾಂಕರ್ನಲ್ಲಿ ನೀರು ಕೊಡುವ ಸನ್ನಿವೇಶ ಬರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದರು.
ಅಕ್ಟೋಬರ್ ತಿಂಗಳಲ್ಲಿ ಮಳೆಯಿಂದಾದ ಹಾನಿಯ ವಿವರ ಸಂಗ್ರಹಿಸಿ, ಪರಿಹಾರ ನೀಡುವ ಕಾರ್ಯ ಶೀಘ್ರ ಪ್ರಾರಂಭಿಸುವಂತೆ ಮಹೇಶ್ವರ ರಾವ್ ತಿಳಿಸಿದರು. ಮಳೆಯಿಂದಾಗಿ ಕೃಷಿಗೆ ಬಾರಿ ನಷ್ಟದ ಜೊತೆಗೆ, ಅಡಿಕೆ ಬೆಳೆಗೆ ಕೊಳೆ ರೋಗದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಸರಕಾರದಿಂದ ಸರ್ವೇ ನಡೆಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಕೋರಿದರು.
ಡೀಮ್ಡ್ ಪಾರೆಸ್ಟ್ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ನಡೆಸಬೇಕು ಹಾಗೂ ಜಂಟಿ ಸರ್ವೇ ನಡೆಸಿ ಆರ್ಟಿಸಿ ಮಾಡುವ ಮೂಲಕ ಕೆಲಸ ಶೀಘ್ರ ಮುಗಿಸುವಂತೆ ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸುವ ಮೂಲಕ ಗುರಿ ಸಾಧಿಸುವಂತೆ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಎಂ. ಮಹೇಶ್ವರ ರಾವ್ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಿಇಒ ಪ್ರೀತಿ ಗೆಹ್ಲೋಟ್, ಎಸ್ಪಿ ನಿಶಾ ಜೇಮ್ಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.