ಶಾಲಾ ಮಕ್ಕಳು ಟಿಪ್ಪು ಇತಿಹಾಸ ಬದಲು, ಬಿಎಸ್ವೈ ಜೈಲಿಗೆ ಹೋಗಿದ್ದನ್ನು ತಿಳಿದುಕೊಳ್ಳಬೇಕಿದೆ
ಶಾಸಕ ತನ್ವೀರ್ ಸೇಠ್
ಮೈಸೂರು,ಅ.31: ಶಾಲಾ ಮಕ್ಕಳು ಟಿಪ್ಪು ಸಾಧನೆ ತಿಳಿದು ಕೊಳ್ಳುವ ಬದಲು ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿರುವ ಇತಿಹಾಸ ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಮಾಡಿ ಎಂದು ನಾವು ಕೇಳಿರಲಿಲ್ಲ. ಸರ್ಕಾರ ಮಾಡಲು ಮುಂದಾಯಿತು. ಅದನ್ನು ನಾವು ಸ್ವಾಗತ ಮಾಡಿದೆವು. ಆದರೆ ಈಗಿನ ಬಿಜೆಪಿ ಸರ್ಕಾರ ಟಿಪ್ಪು ಇತಿಹಾಸ, ಸಾಧನೆಯನ್ನು ಪಠ್ಯದಿಂದ ತೆಗೆದು ಹಾಕುವ ತೀರ್ಮಾನ ಕೈಗೊಂಡಿದೆ. ಇದೊಂದು ರೀತಿಯಲ್ಲಿ ಜನರ ಜೊತೆಗಿನ ಚೆಲ್ಲಾಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪ್ಪ, ಮಕ್ಕಳ ಇತಿಹಾಸವನ್ನು ತೆಗೆದು ಹಾಕಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಹಾಗಾದರೆ, ಶಾಲಾ ಮಕ್ಕಳು ಟಿಪ್ಪು ಇತಿಹಾಸ ತಿಳಿದುಕೊಳ್ಳುವ ಬದಲು, ಬಿಜೆಪಿ ಸರ್ಕಾರದ ಗಣಿ ಹಗರಣ, ಆಪರೇಷನ್ ಕಮಲ ಮತ್ತು ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿರುವುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಲೇವಡಿ ಮಾಡಿದರು.
ಪಠ್ಯ ಪುಸ್ತಕದಿಂದ ಟಿಪ್ಪು ಬಗೆಗಿನ ಇತಿಹಾಸ ತೆಗೆದು ಹಾಕಬಹುದು. ಆದರೆ ಕೋಟ್ಯಂತರ ಜನರ ಮನಸ್ಸಿನಲ್ಲಿನ ಟಿಪ್ಪು ಬಗೆಗಿನ ಪ್ರೀತಿಯನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದ ಅವರು, ರಾಜ್ಯ ಸರ್ಕಾರದ ನಿರ್ಧಾರದಿಂದ ಯಾರೂ ಪ್ರಚೋಧನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು.