ಪಠ್ಯದಿಂದ ತೆಗೆದರೆ ಟಿಪ್ಪು ಇತಿಹಾಸ ಸತ್ತು ಹೋಗುವುದಿಲ್ಲ: ರಾಜ್ಯ ಸರ್ಕಾರದ ನಡೆಗೆ ಎಚ್.ವಿಶ್ವನಾಥ್ ಕಿಡಿ
ಮೈಸೂರು,ನ.1: ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದ ಮಾತ್ರಕ್ಕೆ ಇತಿಹಾಸ ಸತ್ತು ಹೋಗುವುದಿಲ್ಲ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ರಾಜ್ಯ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಟಿಪ್ಪು ಮೈಸೂರಿನ ಹುಲಿ. ಶ್ರೀರಂಗಪಟ್ಟಣ, ಶೃಂಗೇರಿ, ದೇವನಹಳ್ಳಿ ಮತ್ತು ನಂಜನಗೂಡಿನಲ್ಲಿ ಟಿಪ್ಪು ಸಾಧನೆ ನೋಡಬಹುದು. ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದು ಹಾಕುವುದು ಸರಿಯಲ್ಲ ಎಂದು ಹೇಳಿದರು.
ಉಪಚುನಾವಣೆಗೂ ಟಿಪ್ಪು ವಿಚಾರಕ್ಕೂ ಸಂಬಂಧವಿಲ್ಲ. ಟಿಪ್ಪು ವಿಚಾರವನ್ನು ರಾಜಕೀಯವಾಗಿ ವಿಶ್ಲೇಷಿಸಬಾರದು. ಜಗತ್ತಿನಲ್ಲಿ ಇತಿಹಾಸ ಚರಿತ್ರೆ ಓದಿಕೊಂಡೆ ಮುಂದುವರೆಯುವುದು. ಟಿಪ್ಪು ಹಲವಾರ ಸಾಧನೆ ಮಾಡಿದ್ದಾನೆ. ಅದನ್ನು ಯಾರು ತೆಗೆದು ಹಾಕಲು ಸಾಧ್ಯವಿಲ್ಲ, ಮರೆಮಾಚಲು ಸಾಧ್ಯವಿಲ್ಲ, ಇತಿಹಾಸ ಎಂದ ಮೇಲೆ ನಾಯಕರು ಮತ್ತು ಖಳನಾಯಕರು ಇರುತ್ತಾರೆ ಎಂದು ಹೇಳಿದರು.
ಟಿಪ್ಪುವಿದೆ ಒಂದು ಇತಿಹಾಸ, ಮೈಸೂರು ಮಹರಾಜರದ್ದೆ ಒಂದು ಇತಿಹಾಸ. ಟಿಪ್ಪುವಿನ ಬಗ್ಗೆ ಬರೆದಿರುವ ಹಲವಾರು ಪುಸ್ತಕಗಳು ಲಭ್ಯವಿದೆ. ಪಠ್ಯದಿಂದ ತೆಗೆದು ಹಾಕಿದ ಮಾತ್ರಕ್ಕೆ ಇತಿಹಾಸ ಸಾಯುವುದಿಲ್ಲ. ಟಿಪ್ಪು ಸದಾಕಾಲ ಜೀವಂತ. ಟಿಪ್ಪು ಇತಿಹಾಸ ಪಠ್ಯದಿಂದ ತೆಗೆದು ಹಾಕುವ ತೀರ್ಮಾನವನ್ನು ಸರ್ಕಾರ ಪರಾಮರ್ಶಿಸುವ ಅಗತ್ಯವಿದೆ ಎಂದು ಹೇಳಿದರು.