ಕನ್ನಡ ಅನುಷ್ಠಾನದ ಬಗ್ಗೆ ಸರಕಾರ ದೃಢಶಿಕ್ಷಣ ನೀತಿಯನ್ನು ಪುನಶ್ಚೇತನಗೊಳಿಸಲಿ : ಡಾ. ಮೋಹನ್ ಆಳ್ವ
ಮಂಗಳೂರು, ನ.2: ಕನ್ನಡ ಶಾಲೆಗಳು, ವಿದ್ಯಾಸಂಸ್ಥೆಗಳಲ್ಲದೆ ಎಲ್ಲಾ ಸರಕಾರಿ ರಂಗದ ವಿದ್ಯಾಸಂಸ್ಥೆಗಳಲ್ಲೂ ಕನ್ನಡ ಭಾಷಾ ಅನುಷ್ಠಾನದ ಬಗ್ಗೆ ಸರಕಾರವು ಆತ್ಮವಿಮರ್ಶೆ ಮಾಡಬೇಕಾದ ಕಾಲಸನ್ನಿಹಿತವಾಗಿದೆ. ತರಗತಿಗೆ ಒಂದರಂತೆ ಅಧ್ಯಾಪಕರನ್ನು ನೇಮಿಸುವ ಮೂಲಕ ಶಿಕ್ಷಣ ಸಂಸ್ಥೆಗಳ ಸ್ವಾಸ್ಥ್ಯವನ್ನು ಕಾಪಾಡುವ ಕರ್ತವ್ಯ ಸರಕಾರ ಸಹಿತ ನಮ್ಮೆಲ್ಲರದ್ದಾಗಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ.1ರಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.
ಎ.ಜೆ. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಎ.ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಾರ್ತಾಧಿಕಾರಿ ಖಾದರ್ ಶಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಜಿ.ಕೆ. ಭಟ್ ಸೇರಾಜೆ, ಪೊಳಲಿ ನಿತ್ಯಾನಂದ ಕಾರಂತ, ಪೂರ್ಣಿಮಾ ರಾವ್ ಪೇಜಾವರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ವಿವಿಧ ಶಾಲಾ ಮಕ್ಕಳಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಹೊರನಾಡಿನ ಬಾಲ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು.
ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ದಯಾನಂದ ಕಟೀಲು, ಮಂಜುಳಾ ಶೆಟ್ಟಿ, ಉಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.