ಯಶಸ್ವಿ ರಾಜಕಾರಣಿ ದೇವರು-ಧರ್ಮಕ್ಕೆ ಹೆದರುವಂತಿಲ್ಲ: ಪೇಜಾವರ ಶ್ರೀ
ಬೆಂಗಳೂರು, ನ.3: ಯಶಸ್ವಿ ರಾಜಕಾರಣಿಯಾಗಿದ್ದರೆ ದೇವರು ಮತ್ತು ಧರ್ಮಕ್ಕೆ ಹೆದರುವಂತಿಲ್ಲ ಎಂದು ಉಡುಪಿ ಮಠದ ಪೀಠಾಧ್ಯಕ್ಷ ವಿಶ್ವೇಶ್ವರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ನಗರದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸಭಾಂಗಣದಲ್ಲಿ ವಸಂತ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಜಿ.ಎನ್.ರಂಗನಾಥರಾವ್ ಕನ್ನಡಕ್ಕೆ ಅನುವಾದಿಸಿರುವ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರ ಮಹಾಭಾರತ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಪ್ರತಿನಿತ್ಯ ಒಂದಲ್ಲಾ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರಂತರ ಹೋರಾಟವಿರುತ್ತದೆ. ಆದರೆ, ಯಾವುದಕ್ಕೂ ಹೆದರಬಾರದು ಎಂದ ಅವರು, ದೇವಸ್ಥಾನ, ಮಸೀದಿ, ಚರ್ಚ್ ಎಲ್ಲಿಯಾದರೂ ಹೋಗಲಿ. ಆದರೆ, ಅಲ್ಲಿಗೆ ಭಕ್ತಿಯಿಂದ ಹೋಗಬೇಕು, ವಿನಹಃ ಪ್ರದರ್ಶನಕ್ಕಾಗಿ ಹೋಗಬಾರದು ಎಂದು ಸ್ವಾಮೀಜಿ ತಿಳಿಸಿದರು.
ಮಹಾಭಾರತದಲ್ಲಿ ಸಂಸ್ಕೃತಿ, ರಾಜಕೀಯ, ತತ್ವಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಎಲ್ಲವೂ ಅಡಗಿದ್ದು, ಅದೊಂದು ಮಹೋನ್ನತ ಗ್ರಂಥವಾಗಿದೆ. ಮಹಾಭಾರತವು ಪಾಂಡವರು ಹಾಗೂ ಕೌರವರ ನಡುವಿನ ಯುದ್ಧವಾಗಿದೆ. ಆದರೆ, ಅದರಲ್ಲಿ ಹಲವಾರು ಅಂಶಗಳನ್ನು ನಾವು ಕಲಿಯುವುದು ಇದೆ. ಧರ್ಮ ರಕ್ಷಣೆಯ ಪಾಠವಿದೆ ಎಂದು ಅವರು ನುಡಿದರು.
ಯುದ್ದ ನಡೆದರೆ ಪಾಂಡವರು ಗೆಲ್ಲುತ್ತಾರೆ. ಆದರೆ, ಪಟ್ಟಾಭಿಷೇಕ ದುರ್ಯೋಧನಗೆ ನಡೆಯುತ್ತದೆ. ಇಂದಿನ ಸಂದರ್ಭದಲ್ಲಿಯೋ ಅಂತಹುದೇ ನಡೆಯುತ್ತಿದೆ ಎಂದ ಅವರು, ಮಹಾಭಾರತದಿಂದ ಲೇಖಕರು, ಚಿಂತಕರು, ರಾಜಕಾರಣಿಗಳು, ಪಂಡಿತರು ಸೇರಿದಂತೆ ಎಲ್ಲರೂ ತಿಳಿದುಕೊಳ್ಳಬೇಕಾದ ಅನೇಕ ಅಂಶಗಳು ಇವೆ ಎಂದು ಅವರು ವಿವರಿಸಿದರು.
ವಿದ್ವಾಂಸ ಡಾ.ಶತಾವಧಾನಿ ಆರ್.ಗಣೇಶ್ ಮಾತನಾಡಿ, ಮಹಾಭಾರತದ ಕುರಿತು ಎಷ್ಟು ಬರೆದರೂ ಸಾಲದು, ಇನ್ನೂ ಬರೆಯುವಂತಹದ್ದು ಇದ್ದೇ ಇರುತ್ತದೆ. ನಮ್ಮ ಬದುಕಿನ ಕಥೆ ಮಹಾಭಾರತದ ಕಥೆಯಾಗಿದೆ ಎಂದು ಹೇಳಿದರು.
ಮಹಾಭಾರತದಲ್ಲಿನ ವಿಧುರ ಎಲ್ಲರಿಗೂ ದೊಡ್ಡ ಆದರ್ಶ ವ್ಯಕ್ತಿಯಾಗಿದ್ದಾನೆ. ಕೃಷ್ಣನಂತೆ ಎಲ್ಲವನ್ನೂ ಸಾಧಿಸಿಕೊಡಬಲ್ಲವರು ವಿರಳ ಎಂದ ಅವರು, ಕೆಡುಕಿನ ನಡುವೆ ಒಳ್ಳೆಯವರು ಇರುತ್ತಾರೆ. ಮಹಾಭಾರತ ನೇರ ಕಥೆಯಾಗಿ ನೋಡುವ ಅಭ್ಯಾಸವಿದೆ. ಆದರೆ, ಉಪ ಕಥೆಗಳಲ್ಲಿ ಸಿಗುವ ಜೀವನ ಮೌಲ್ಯ ಮುಖ್ಯ ಕಥೆಯಲ್ಲಿ ಸಿಗದಿರಬಹುದು ಎಂದು ತಿಳಿಸಿದರು.
ಕನ್ನಡದ ಕೃತಿಗಳಿಗೆ ಸಮರ್ಥಕವಾದ ಅನುವಾದಕರು ಸಿಗದೇ ಇರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಲಾಗುತ್ತಿಲ್ಲ. ಜನಕ್ಕೆ ಓದುವ ತಾಳ್ಮೆಯಿದ್ದು, ಒಳ್ಳೆಯ ಕೃತಿಗಳು ಸಿಕ್ಕಿದರೆ ಖಂಡಿತ ಓದುತ್ತಾರೆ. ಅನುವಾದ ಉತ್ತಮವಾಗಿದೆ. ಮೂಲಕೃತಿಯ ಸಾರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಅನುವಾದಕ ಜಿ.ಎನ್.ರಂಗನಾಥರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.