ನ. 6ರಿಂದ 8: ಸಮಗ್ರ ಮಹಾಭಾರತ ಸಮರ್ಪಣ ಉತ್ಸವ
ಉಡುಪಿ, ನ.4: ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ತತ್ವ ಸಂಶೋಧನ ಸಂಸತ್ತಿನ ನೇತೃತ್ವದಲ್ಲಿ ಸಮಗ್ರ ಮಹಾಭಾರತ ಸಮರ್ಪಣ ಉತ್ಸವ ಹಾಗೂ ಶ್ರೀವ್ಯಾಸ-ದಾಸ ವಿ‘ಜಯ’ ಉತ್ಸವ ನ.6ರಿಂದ 8ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಮಾನ್ಯತೀರ್ಥರು ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.6ರ ಬೆಳಗ್ಗೆ 8:45ಕ್ಕೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸೇರಿದಂತೆ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬಳಿಕ ಮಹಾಭಾರತದ ಕುರಿತು ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ ಹಾಗೂ ಪ್ರವಚನ ನಡೆಯಲಿದೆ ಎಂದರು.
ನ.6ರ ಸಂಜೆ 4:30ಕ್ಕೆ ಅಂಕಣಕಾರ ರೋಹಿತ್ ಚಕ್ರತೀರ್ಥ ಅವರು ‘ಮಹಾಭಾರತದ ಹಿನ್ನೆಲೆಯಲ್ಲಿ ಧರ್ಮಯುದ್ಧ’ ವಿಷಯದ ಕುರಿತು ಹಾಗೂ 5:15ರಿಂದ ಲೋಕಸಭಾ ಸದಸ್ಯ ತೇಜಸ್ವೀಸೂರ್ಯ ಅವರು ‘ಮಹಾಭಾರತದ ಸಾಂವಿಧಾನಿಕ ನೀತಿಗಳು’ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.
ನ.7ರ ಸಂಜೆ 4:30ಕ್ಕೆ ಚಿನ್ನದ ರಥದಲ್ಲಿ ಮಹಾಭಾರತದ ಸಮಗ್ರ ಗ್ರಂಥಗಳನ್ನಿರಿಸಿ ಹಾಗೂ ವಿಜಯದಾಸರ ಭವ್ಯ ಶೋಭಾ ಯಾತ್ರೆ ರಥಬೀದಿಯಲ್ಲಿ ನಡೆಯಲಿದೆ. ಸಂಜೆ 5:00ಗಂಟೆಗೆ ಸಂಪೂರ್ಣ ಮಹಾಭಾರತ ಗ್ರಂಥಗಳ ಸಮರ್ಪಣೆ ಸಮಸ್ತ ಮಾಧ್ವ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮಹಾಭಾರತ ಸಂಸ್ಕೃತ ಮತ್ತು ಕನ್ನಡ ಗ್ರಂಥಗಳ ಆಂಡ್ರಾಯ್ಡಾ ಆ್ಯಪ್ ಸಹ ಬಿಡುಗಡೆಗೊಳ್ಳಲಿದೆ.
ಉಡುಪಿಯ ಅಷ್ಟಮಠಗಳು ಹಾಗೂ ಶ್ರೀಸುಬ್ರಹ್ಮಣ್ಯ ಮಠದಲ್ಲಿ ಇರುವ ಸುಮಾರು 250ಕ್ಕೂ ಅಧಿಕ ಪ್ರಾಚೀನ ತಾಳಪತ್ರಗಳನ್ನು ಕಲೆಹಾಕಿ, ನಾಡಿನ ಪ್ರಸಿದ್ಧ 40 ಮಂದಿಹಿರಿಯ ವಿದ್ವಾಂಸರ ತಂಡ ಕಳೆದ ಎಂಟು ವರ್ಷಗಳಲ್ಲಿ ನಡೆಸಿದ ಸಂಶೋಧನೆಯಿಂದ ಕನ್ನಡದಲ್ಲಿ 37 ಸಂಪುಟಗಳಲ್ಲಿ ಹಾಗೂ ಸಂಸ್ಕೃತ ದಲ್ಲಿ 24 ಸಂಪುಟಗಳಲ್ಲಿ ಒಟ್ಟು 61 ಸಂಪುಟಗಳಲ್ಲಿ ಸಮಗ್ರ ಮಹಾಭಾರತ ಗ್ರಂಥ ಹೊರಬಂದಿದೆ ಎಂದು ಅವರು ತಿಳಿಸಿದರು.
ಅಷ್ಟಮಠಗಳಲ್ಲಿರುವ 250ಕ್ಕೂ ಅಧಿಕ ತಾಳಪತ್ರಗಳಲ್ಲಿ 99,400 ಶ್ಲೋಕಗಳು ಸಿಕ್ಕಿದ್ದು, ಅವುಗಳನ್ನು ಕನ್ನಡಕ್ಕೆ ಅನುವಾದಿಸಿ, ಆನಂದತೀರ್ಥಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯ ಹಾಗೂ ವಾದಿರಾಜರ ಲಕ್ಷಾಲಂಕಾರ ಶ್ಲೋಕಗಳನ್ನು ಅಳವಡಿಸಿ ಸಂಪೂರ್ಣ ಮಹಾಭಾರತ ಗ್ರಂಥವನ್ನು 37 ಸಂಪುಟಗಳಲ್ಲಿ ಮುದ್ರಿಸಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದವರು ನುಡಿದರು.