ಐರಿನ್ ರೆಬೆಲ್ಲೋಗೆ ಕಲಾಕಾರ್ ಪ್ರಶಸ್ತಿ ಪ್ರದಾನ
ಮಂಗಳೂರು, ನ.4: ಕೊಂಕಣಿಯ ಜನಪದ ವೊವಿಯೊ ವೇರ್ಸ್ ಪ್ರಕಾರದಲ್ಲಿ ಕೆಲಸ ಮಾಡಿದ ಐರಿನ್ ರೆಬೆಲ್ಲೊಗೆ ಶಕ್ತಿನಗರದ ಕಲಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಕಾರ್ವಾಲ್ ಘರಾಣೆಂ ಹಾಗೂ ಮಾಂಡ್ ಸೊಭಾಣ್’ನ 15ನೇ ಕಲಾಕಾರ್ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸನ್ಮಾನ ಪತ್ರ, ಸ್ಮರಣಿಕೆ ಹಾಗೂ 25,000 ರೂ.ವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿದ ಸಂದೇಶ ಪ್ರತಿಷ್ಟಾನದ ನಿರ್ದೇಶಕ ವಂ. ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ ಯಾವುದೇ ಭಾಷೆ ಮಾತನಾಡುವುದು ಸುಲಭ. ಆದರೆ ಆ ಭಾಷೆಗಾಗಿ ದುಡಿಯುವುದು ಕಷ್ಟ. ಭಾಷೆಗಾಗಿ ಕಷ್ಟಪಟ್ಟು ದುಡಿದ ಐರಿನ್ ರೆಬೆಲ್ಲೊರನ್ನು ಪುರಸ್ಕರಿಸಿ ಗೌರವಿಸಲಾಗುತ್ತಿದೆ. ಅವರಿಂದ ಪ್ರೇರಣೆ ಪಡೆದು ಇತರರೂ ಭಾಷಾ ಬೆಳವಣಿಗೆಗಾಗಿ ದುಡಿಯುವಂತಾಗಬೇಕು’ಎಂದು ಹೇಳಿದರು.
ಕ್ಲಾರಾ ಡಿಕುನ್ಹಾ ಸನ್ಮಾನ ಪತ್ರ ವಾಚಿಸಿದರು. ಡಾ.ಪ್ರತಾಪ್ ನಾಯ್ಕಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಜೆ ಪಿಂಟೊ ಹಾಗೂ ನವೀನ್ ಲೋಬೊ ಉಪಸ್ಥಿತರಿದ್ದರು. ಜಾಸ್ಮಿನ್ ಲೋಬೊ ಆಗ್ರಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತಿಂಗಳ ವೇದಿಕೆ: ಡಾ. ಪ್ರತಾಪ್ ನಾಯ್ಕ ಹಾಗೂ ಎರಿಕ್ ಡಿಸೋಜ ಪೆರಂಪಳ್ಳಿ ದುಬಯ ಇವರು ಗಂಟೆ ಬಾರಿಸಿ 215ನೇ ತಿಂಗಳ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾಂತಿ ಬ್ರದರ್ಸ್ ತಂಡದಿಂದ ಬಿಂದಾಸ್ 2.0 ಎಂಬ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಎರಿಕ್-ಜೊಯ್ಸ್ ಒಝೇರಿಯೊ, ಅರುಣ್-ಆಂಜೆಲಿನ್ ದಾಂತಿ, ಡಾ. ವಿನ್ಸೆಂಟ್ ಆಳ್ವಾ, ಹೆರಾಲ್ಡ್ ತಾವ್ರೊ, ನಿಹಾಲ್ ತಾವ್ರೊ, ಇಕ್ಬಾಲ್, ನಿಶಾ ದಾಂತಿ, ಜೊಯೆಲ್ ಅತ್ತೂರ್, ವೆಲೆಂಟಿನಾ ಕ್ಯಾಸ್ತೆಲಿನೊ, ಕ್ಯಾರಲ್ ದಾಂತಿ, ಫ್ರಾನ್ಸಿಸ್ ರೊಡ್ರಿಗಸ್, ಟ್ರಿನಾಲ್ ಪಿಂಟೊ ಮತ್ತಿತರರು ಹಾಡಿದರು.
ಬಿಂದಾಸ್ ಪೆರ್ನಾಲ್ ತಂಡದಿಂದ ಹಾಸ್ಯ ಪ್ರದರ್ಶನ ನಡೆಯಿತು. ರೋಶನ್ ಬೆಳಾ, ವಿಜ್ಜು, ರಾಜ್ ಮತ್ತು ರಾಜ್ ಸಂಗೀತದಲ್ಲಿ ಸಹಕರಿಸಿದರು. ಅಮನ್ ಕ್ರಿಸ್ ವಂದಿಸಿದರು. ಆಲ್ವಿನ್ ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು.