ಮಲೀನಗೊಂಡಿದ್ದ ಮಹಾಭಾರತದ ಶುದ್ದೀಕರಣ: ಪೇಜಾವರ ಶ್ರೀ
ಉಡುಪಿ, ನ.7: ಗಂಗಾ ನದಿಯು ದೇವರ ಪಾದದಿಂದ ಹಾಗೂ ಮಹಾ ಭಾರತ ಎಂಬ ಗಂಗೆ ವ್ಯಾಸರ ಮುಖದಿಂದ ಹುಟ್ಟಿದೆ. ಪ್ರಸ್ತುತ ಇವು ಎರಡೂ ಕೂಡ ಮಲೀನವಾಗಿದೆ. ಗಂಗಾ ನದಿಯನ್ನು ಶುದ್ದಿ ಮಾಡಲು ನಮ್ಮ ರಾಜ ಕಾರಣಿಗಳಿಗೆ ಇನ್ನು ಸಾಧ್ಯವಾಗಿಲ್ಲ. ಆದರೆ ಮಹಾಭಾರತವನ್ನು ಶುದ್ದೀಕರಣ ಮಾಡುವ ಕೆಲಸ ಉಡುಪಿಯ ಪರ್ಯಾಯ ಮಠದಿಂದ ನಡೆದಿದೆ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತತ್ವಸಂಶೋಧನಾ ಸಂಸತ್ ನೇತೃತ್ವದಲ್ಲಿ ನಿನ್ನಾ ಒಲುಮೆಯಿಂದ ಪ್ರತಿಷ್ಠಾನ ಶ್ರೀ ಕೃಷ್ಣ ಮಠದಲ್ಲಿ ಆಯೋಜಿಸಲಾದ ಸಮಗ್ರ ಶ್ರೀಮಹಾಭಾರತ ಸಮರ್ಪಣೋತ್ಸವ ಮತ್ತು ಶ್ರೀವ್ಯಾಸ-ದಾಸ ವಿ’ಜಯ’ ಉತ್ಸವದಲ್ಲಿ ಇಂದು ಸಂಪೂರ್ಣ ಮಹಾಭಾರತ ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಒಟ್ಟು 61 ಸಂಪುಟಗಳಲ್ಲಿ ಈ ಮಹಾಭಾರತ ಗ್ರಂಥವನ್ನು ಹೊರತರಲಾಗಿದೆ. ಈ ಗ್ರಂಥವು ಅಧ್ಯಯನ ಮಾಡುವವರಿಗೆ ಅನುಕೂಲಕರವಾದ ಗ್ರಂಥವಾಗಿದೆ. ಆದುದರಿಂದ ಇದರ ಪ್ರಯೋಜನವನ್ನು ಅಧ್ಯಯನಕಾರರು ಪಡೆದುಕೊಳ್ಳಬೇಕು ಎಂದರು.
ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಅದಮಾರುಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಪ್ರಯಾಗ ಮಠದ ಶ್ರೀವಿದ್ಯಾತ್ಮತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಾಭಾರತ ಗ್ರಂಥದ ಕನ್ನಡ ಮತ್ತು ಸಂಸ್ಕೃತ ಮೊಬೈಲ್ ಆ್ಯಪ್ನ್ನು ಬಿಡುಗಡೆಗೊಳಿಸಲಾಯಿತು. ಪಲಿಮಾರು ಮಠದ ದಿವಾನ ವೇದವ್ಯಾಸ ತಂತ್ರಿ ಸ್ವಾಗತಿಸಿದರು. ಡಾ.ಬೆ.ನಾ.ವಿಜಯೀಂದ್ರಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ರಥಬೀದಿಯಲ್ಲಿ ಮಹಾಭಾರತ ಗ್ರಂಥಗಳ ಹಾಗೂ ವಿಜಯದಾಸರ ಭ್ಯ ಶೋಭಾಯಾತ್ರೆ ನಡೆಯಿತು.