ಅಯೋಧ್ಯೆ ವಿವಾದದ ತೀರ್ಪು ಸ್ವಾಗತಾರ್ಹ: ಚಂದ್ರಶೇಖರ ಸ್ವಾಮೀಜಿ
ಮಂಗಳೂರು, ನ.9: ದೇಶ ಬಹುಕಾಲದಿಂದ ಕಾಯುತ್ತಿದ್ದ, ರಾಜಕೀಯ ಮತ್ತು ಧಾರ್ಮಿಕವಾಗಿ ಬಹುಸೂಕ್ಷವಾಗಿರುವ ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಹಾಗೂ ಐತಿಹಾಸಿಕ ತೀರ್ಮಾನವಾಗಿದೆ ಎಂದು ಆಧ್ಯಾತ್ಮ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂಕೋರ್ಟ್ ನ ಪಂಚ ನ್ಯಾಯಮೂರ್ತಿಗಳ ಪೀಠವು ರಾಮ ಜನ್ಮಭೂಮಿ ಬಾಬರಿ ಮಸೀದಿಯ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನೀಡಿರುವ ಐತಿಹಾಸಿಕ ತೀರ್ಪು ಶತಮಾನಗಳ ಸಂಘರ್ಷಕ್ಕೆ ಅಂತಿಮ ತೆರೆ ಎಳೆಯಲಿದೆ. ನ್ಯಾಯಾಲಯವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗೌರವವನ್ನು ಹೆಚ್ಚಿಸಿದೆ. ದೇಶದ ಜನತೆ ಶಾಂತಿ ಕಾಪಾಡುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಗೆ ಗೌರವ ತೋರಿಸಿದ್ದಾರೆ. ಇದು ಸ್ವಾಗತಾರ್ಹ ವಿಚಾರ ಎಂದು ಸ್ವಾಮೀಜಿ ಉಲ್ಲೇಖಿಸಿದ್ದಾರೆ.
ಎಲ್ಲ ಧರ್ಮದವರಿಗೆ ಧಕ್ಕೆಯಾಗದಂತೆ ಸುಪ್ರೀಂ ಕೋರ್ಟ್ ತೀರ್ಮಾನ ನೀಡಿದೆ. ಮಾತ್ರವಲ್ಲದೆ ಈ ತೀರ್ಮಾನವು ದೇಶದ ಹಿತದೃಷ್ಟಿಯಿಂದ ಸಮಗ್ರ ತೀರ್ಮಾನವಾಗಿದೆ. ಭವಿಷ್ಯದ ಭಾರತದಲ್ಲಿ ಶಾಂತಿ ನೆಲೆಸಲು ಸಾರ್ವಜನಿಕರು ಈ ತೀರ್ಮಾನವನ್ನು ಗೌರವಿಸಬೇಕು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.