ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಪೂರ್ವಭಾವಿ ಸಭೆ
ಕಾಪು, ನ.16: ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ವೌಲ್ಯಭರಿತ ಶಿಕ್ಷಣವೇ ಅವರ ಭವಿಷ್ಯದ ಜೀವನದ ತಳಹದಿ. ಜೀವನದಲ್ಲಿ ಶಿಸ್ತು, ರಾಷ್ಟ್ರಭಕ್ತಿಯ ಜೊತೆಗೆ ದೈಹಿಕ, ಬೌದ್ಧಿಕ, ಸೇವಾ ಸಾಮರ್ಥ್ಯವನ್ನು ಬಿಂಬಿಸುವ ಭಾರತ ಸೇವಾ ದಳ, ಸೇವಾ ಮನೋಭಾವದ ರಾಷ್ಟ್ರಭಕ್ತರನ್ನು ತರಬೇತಿಗೊಳಿಸುವ ಸಂಸ್ಥೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ.
ಶಂಕರಪುರ ಸಂತ ಜೋನರ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಡಿ.7ರಂದು ಏರ್ಪಡಿಸಲಾದ ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಗುರುವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮೇಳದ ಉಸ್ತುವಾರಿ ವಹಿಸಿರುವ ಭಾರತ ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಇಡೀ ಕಾರ್ಯಕ್ರಮದ ವಿವಿಧ ಹಂತ ಗಳನ್ನು ವಿವರಿಸಿದರು. ಮಕ್ಕಳ ಮೇಳದ ಗೌರವಾಧ್ಯಕ್ಷ ಹಾಗೂ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ಪರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿದರು.
ಮಕ್ಕಳ ಮೇಳದ ಸಂಚಾಲಕಿ ಮಾಲಿನಿ ಶೆಟ್ಟಿ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್ವಾಜ್, ಗ್ರಾಪಂ ಅಧ್ಯಕ್ಷೆ ಜ್ಯೂಲಿಯೆಟ್ ವೀರಾ ಡಿಸೋಜ, ಜಿಲ್ಲಾ ಸಮಿತಿಯ ಸದಸ್ಯ ಬಿ.ಪುಂಡಲೀಕ ಮರಾಠೆ, ಜಿಲ್ಲಾ ಸಂಘಟ ಪಕ್ಕೀರ ಗೌಡ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೊಡ್ರಿಗಸ್ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಡೋಮಿಯನ್ ಆರ್.ನೊರೋನ್ಹಾ ಸ್ವಾಗತಿಸಿದರು. ತಾಲೂಕು ಅಧಿನಾಯಕ ಎಸ್.ಎಸ್.ಪ್ರಸಾದ್ ವಂದಿಸಿದರು.