ಅತ್ಯಾಚಾರ-ಕೊಲೆ ಪ್ರಕರಣ : ಸಯನೈಡ್ ಮೋಹನ್ ಆರೋಪ ಸಾಬೀತು
ಮಂಗಳೂರು, ನ.23: ಸರಣಿ ಹಂತಕ ಸಯನೈಡ್ ಮೋಹನ್ ಕಾಸರಗೋಡಿನ ಯುವತಿಯನ್ನು ಕರೆದೊಯ್ದು ಕೊಲೆ ಮಾಡಿದ ಪ್ರಕರಣ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನ.26ರಂದು ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಕರಣ ವಿವರ: ಕಾಸರಗೋಡಿನ ಕುಂಬಳೆ ಬಸ್ ನಿಲ್ದಾಣದಲ್ಲಿ 2009ರ ಎಪ್ರಿಲ್ನಲ್ಲಿ ಮೋಹನ್ಗೆ 28 ವರ್ಷ ಪ್ರಾಯದ ಬೀಡಿ ಕಾರ್ಮಿಕ ಯುವತಿಯ ಪರಿಚಯವಾಗಿದ್ದು, ತನ್ನನ್ನು ಆನಂದ ಪೂಜಾರಿ ಎಂಬುದಾಗಿ ಆತ ಪರಿಚಯಿಸಿದ್ದನು. 2009ರ ಮೇ 21ರಂದು ಆತ ಆಕೆಯನ್ನು ಕುಶಾಲನಗರಕ್ಕೆ ಕರೆದೊಯ್ದು ಅಲ್ಲಿನ ಲಾಡ್ಜ್ನಲ್ಲಿ ರೂಂ ಮಾಡಿ ಮದುವೆ ಆಗುವುದಾಗಿ ನಂಬಿಸಿ ರಾತ್ರಿ ಅತ್ಯಾಚಾರ ಎಸಗಿದ್ದನು. ಮರುದಿನ ಬೆಳಗ್ಗೆ ಪೂಜೆಗೆಂದು ಹೇಳಿ ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸಯನೈಡ್ ನೀಡಿದ್ದು, ಅದನ್ನು ಸೇವಿಸಿದ ಯುವತಿ ಶೌಚಾಲಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಬಳಿಕ ಮೋಹನ್ ಲಾಡ್ಜ್ಗೆ ತೆರಳಿ ಆಕೆಯ ಚಿನ್ನಾಭರಣ ಗಳೊಂದಿಗೆ ಪರಾರಿಯಾಗಿದ್ದನು.
ಯುವತಿ ಮನೆಯಿಂದ ಹೊರಡುವಾಗ ತಾನು ಪೆರ್ಲದಲ್ಲಿರುವ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿದ್ದಳು. ಮೂರು ದಿನಗಳಾದರೂ ಆಕೆ ಹಿಂದಿರುಗಿ ಬಾರದೆ ಮೊಬೈಲ್ ಫೋನ್ ಸಂಪರ್ಕಕ್ಕೂ ಸಿಗದೆ ಇದ್ದಾಗ ಮನೆ ಮಂದಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು. 2009ರ ಸೆಪ್ಟಂಬರ್ನಲ್ಲಿ ಮೋಹನ್ ಬಂಧಿತನಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ಸರಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದಿಸಿದ್ದರು.