ನ.27ರಿಂದ ಉಡುಪಿಗೆ ಪುರಿ ಜಗದ್ಗುರು ಮಹಾಸ್ವಾಮಿ ಭೇಟಿ
ಉಡುಪಿ, ನ. 24: ಶ್ರೀಕ್ಷೇತ್ರ ಪುರಿ ಗೋವರ್ಧನ ಪೀಠದ ಜಗದ್ಗುರು ಶ್ರೀ ನಿಶ್ಛಲಾನಂದ ಸರಸ್ವತಿ ಮಹಾಸ್ವಾಮಿ ಉಡುಪಿಗೆ ಭೇಟಿ ನೀಡಿ, ನ.27ರಿಂದ 29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್, ನ.27ರಂದು ಬೆಳಗ್ಗೆ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿರುವ ಮಹಾಸ್ವಾಮಿಯನ್ನು ವಾಹನ ಮೆರವಣಿಗೆಯ ಮೂಲಕ ಅವರ ವಾಸ್ತವ್ಯ ಹೂಡಲಿರುವ ಇಂದ್ರಾಳಿ ಮಂಚಿ ಗುರ್ಮೆಬೆಟ್ಟು ಮನೆಗೆ ಕರೆದುಕೊಂಡು ಬರಲಾಗುವುದು ಎಂದರು.
ಸಂಜೆ 5ಗಂಟೆಗೆ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿ ರುವ ಸನಾತನ ಧರ್ಮ ಸಭಾ ಸಂದೇಶದಲ್ಲಿ ಅವರು ಭಾಗವಹಿಸಲಿರುವರು. ನ.28ರಂದು ಬೆಳಗ್ಗೆ 11ಗಂಟೆಗೆ ಗುರ್ನೆಬೆಟ್ಟು ಮನೆಯಲ್ಲಿ ಹಿಂದೂ ಧರ್ಮದ ವಿವಿಧ ಸಮುದಾಯದ ಪ್ರಮುಖರ ಜೊತೆ ಸಂವಾದ ನಡೆಸಲಿರುವರು. ಸಂಜೆ 4ಗಂಟೆಗೆ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿರುವರು.
ನ.29ರಂದು ಬೆಳಗ್ಗೆ 11ಗಂಟೆಗೆ ಗುರ್ನೆಬೆಟ್ಟು ಮನೆಯಲ್ಲಿ ಮಾತೃಸಂಗಮ ಕಾರ್ಯಕ್ರಮದಲ್ಲಿ ಮಹಿಳೆಯರ ಜೊತೆ ಸಂವಾದ ನಡೆಸಲಿರುವರು. ಸಂಜೆ 6ಗಂಟೆಗೆ ಇಂದ್ರಾಳಿ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳಲಿರು ವರು ಎಂದು ರಘುಪತಿ ಭಟ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಪ್ರಫುಲ್ಲ ಕುಮಾರ್ ರಾವ್, ಕೋಶಾಧಿಕಾರಿ ಮಂಜುನಾಥ್ ಹೆಬ್ಬಾರ್, ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ಪ್ರಭಾಕರ್ ಪೂಜಾರಿ ಉಪಸ್ಥಿತರಿದ್ದರು.