ಟೋಲ್ಗೇಟ್ಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆ ಡಿಜಿಟಲ್ ಹೆಸರಲ್ಲಿ ಜನರ ಕಿಸೆಗೆ ಕತ್ತರಿ: ಕಾಂಗ್ರೆಸ್
ಉಡುಪಿ, ನ.27: ಹೆದ್ದಾರಿ ಟೋಲ್ಗೇಟ್ಗಳಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸದೆ ಫಾಸ್ಟ್ಟ್ಯಾಗ್ ಮೂಲಕ ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿ ಮಾಡ ಹೊರಟಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಾಸ್ಟ್ಟ್ಯಾಗ್ ಅಳವಡಿಕೆಯೊಂದಿಗೆ ಸ್ಥಳೀಯ ವಾಹನಗಳಿಗೆ ರಿಯಾಯಿತಿ ರದ್ಧು ಪಡಿಸಿರುವುದು ಪರಿಸರದ ನಿವಾಸಿಗಳ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರ ಸ್ಥಳಿಯರ ಬೇಡಿಕೆಗೆ ಸ್ಪಂದಿಸಬೇಕಾಗಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದಲ್ಲಿ ನಗದು ಸುಂಕ ಪಾವತಿಯನ್ನು ಡಿ.1ರಿಂದ ದುಪ್ಪಟ್ಟು ಗೊಳಿಸಿರುವುದು ಹಾಗೂ ನಗದು ಪಾವತಿಗೆ ಒಂದೇ ಗೇಟ್ ಮಾತ್ರ ಕಲ್ಪಿಸಲಾಗುವುದು ಎಂಬ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೇಳಿಕೆ ಜನರ ಸಮಸ್ಯೆಯನ್ನು ದ್ವಿಗುಣಗೊಳಿಸಿದೆ ಎಂದವರು ಫಾಸ್ಟ್ಟ್ಯಾಗ್ ಅಳವಡಿಕೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಒಂದೆಡೆ ದ್ವಿಗುಣ ಶುಲ್ಕ, ಇನ್ನೊಂದೆಡೆ ಒಂದೇ ಗೇಟಿನಿಂದಾಗಿ ದಟ್ಟಣೆ ಹೆಚ್ಚಬಹುದೆಂಬ ಭೀತಿ ಇದ್ದು, ಇದರಿಂದ ಜನಸಾಮಾನ್ಯರ ಸಮಸ್ಯೆ ಹೆಚ್ಚಾಗಲಿದೆ. ಇಷ್ಟರವರೆಗೆ ವಾಹನಗಳಿಗೆ 24 ಗಂಟೆಗಳ ಪ್ರಯಾಣ ಮಾಡುವ ಅವಕಾಶ ಹಾಗೂ ದ್ವಿಮುಖ ವಾಹನ ಸಂಚಾರದ ಟೋಲ್ ಪಾವತಿಸುವ ವ್ಯವಸ್ಥೆಯಿದ್ದು, ಇನ್ನು ಮುಂದೆ ಆ ಅವಕಾಶದಿಂದ ಪ್ರಯಾಣಿಕರು ವಂಚಿತ ರಾಗುವ ಸಂಭವವಿದೆ ಎಂದವರು ತಿಳಿಸಿದ್ದಾರೆ.
ಈ ನಿಯಮ ಜಾರಿಗೊಂಡಲ್ಲಿ ಜನಸಾಮಾನ್ಯನ ಸೌಲಭ್ಯವನ್ನು ಕಸಿದು ಕೊಂಡಂತೆ. ಫಾಸ್ಟ್ಟ್ಯಾಗ್ ಅಳವಡಿಕೆಯಿಂದ ಪ್ರಾಧಿಕಾರಕ್ಕೆ ಮೂರರಿಂದ ನಾಲ್ಕು ಪಟ್ಟು ಆದಾಯ ಏರಿಕೆಯಾಗುವುದರಲ್ಲಿ ಸಂಶಯವಿಲ್ಲ. ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಜನಸಾಮಾನ್ಯರ ಕಿಸೆಗೆ ಕತ್ತರಿಯಾಡಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ ಎಂದವರು ಆರೋಪಿಸಿದರು.
ಫಾಸ್ಟ್ ಟ್ಯಾಗ್ ಅಳವಡಿಕೆಯೊಂದಿಗೆ ಸುಂಕ ಪಾವತಿಗೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದಾಗ ಬ್ಯಾಂಕಿನಲ್ಲೂ ನಿರ್ದಿಷ್ಟ ಹಣವನ್ನು ಠೇವಣಿಯಾಗಿ ಇಡ ಬೇಕಾಗುವುದು. ದೇಶದಲ್ಲಿ 15 ಕೋಟಿಗೂ ಅಧಿಕ ವಾಹನಗಳು ಚಾಲನೆಯ ಲ್ಲಿರಬಹುದು. ಎಲ್ಲರೂ ಫಾಸ್ಟ್ ಟ್ಯಾಗ್ ನೊಂದಣಿ ಮಾಡಿಸಿಕೊಂಡಲ್ಲಿ ಬ್ಯಾಂಕ್ಗಳಿಗೆ ಬಂಡವಾಳ ಹರಿದು ಬರುವುದಲ್ಲಿ ಸಂಶಯವಿಲ್ಲ. ಫಾಸ್ಟ್ ಟ್ಯಾಗ್ ಅಳವಡಿಕೆ ಬಗ್ಗೆ ಮುತುವರ್ಜಿ ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದರು.
ಸುರತ್ಕಲ್ ಟೋಲ್ ಕೇಂದ್ರದ ಕೇವಲ 36 ಕಿ.ಮೀ. ಅಂತರದಲ್ಲಿ ಇನ್ನೊಂದು ಟೋಲ್ ಗೇಟ್ ಇರುವುದನ್ನು ಜನತೆ ವಿರೋಧಿಸಿ ಪ್ರತಿಭಟಿಸಿದರೂ ಹೆದ್ದಾರಿ ಪ್ರಾಧಿಕಾರ ಜನತೆಯ ಬೇಡಿಕೆಗೆ ಸ್ಪಂದಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಬಗ್ಗೆಯಾಗಲಿ ಟೋಲ್ಗೇಟ್ ನೈಜ ಸಮಸ್ಯೆಯ ಪರಿಹಾರಕ್ಕಾಗಿ ಉಡುಪಿ ಹಾಗೂ ಮಂಗಳೂರು ಸಂಸದರು ಯಾವುದೇ ಕಾಳಜಿ ವಹಿಸಿಲ್ಲ. ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಡಿಜಿಟಲ್ ಅಳವಡಿಕೆಯೊಂದಿಗೆ ಜನರ ಕಿಸೆಗೆ ಕತ್ತರಿ ಪ್ರಯೋಗಕ್ಕೆ ಮುಂದಾಗಿರುವುದು ಕೇಂದ್ರದ ಜನವಿರೋಧಿ ನೀತಿಗೆ ಉದಾಹರಣೆಯಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.