‘ಸ್ಮಾರ್ಟ್ ಸಿಟಿ’ಗಾಗಿ ಕಮಾಂಡ್ ಆ್ಯಂಡ್ ಕಂಟ್ರೋಲ್ ವ್ಯವಸ್ಥೆ : ಕಮಿಷನರ್ ಡಾ.ಹರ್ಷ
ಪೊಲೀಸ್ ಫೋನ್ ಇನ್ ಕಾರ್ಯಕ್ರಮ
ಮಂಗಳೂರು, ನ. 29: ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಸಮ್ಮಿಲನಗೊಳಿಸಲು ಸಮಗ್ರವಾದ ಕಮಾಂಡ್ ಆ್ಯಂಡ್ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸುವಂತೆ ಸಲಹೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ಶುಕ್ರವಾರ ಆಯುಕ್ತಾಲಯದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಸ್ಮಾರ್ಟ್ ಸಿಟಿ ಯೋಜನೆಯ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಫೋನ್ ಸೌಲಭ್ಯ, ಪ್ರಮುಖ ತಾಣಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಕೆ, ವೀಡಿಯೋಗ್ರಫಿಗೆ ಡ್ರೋನ್ ಮತ್ತು ಮಾನವ ರಹಿತ ವೈಮಾನಿಕ ಸಮೀಕ್ಷಾ ವ್ಯವಸ್ಥೆ, ನಗರದ ಗಡಿ ಭಾಗಗಳ ಭದ್ರತೆಯನ್ನು ಬಲ ಪಡಿಸಲು ಕರಾವಳಿ ತೀರದಲ್ಲಿ ವಿಶ್ಯುವಲ್ ಕ್ಯಾಮರಾ ಇತ್ಯಾದಿಯಾಗಿ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಜಾಗತಿಕವಾಗಿ ಲಭ್ಯವಿರುವ ಅತ್ಯುತ್ತಮ ಹಾಗೂ ಮಾದರಿ ಸೇವಾ ಸೌಲಭ್ಯಗಳನ್ನು ಅಳವಡಿಸುವಂತೆ ಸಲಹೆ ಮಾಡಲಾಗಿದೆ ಎಂದು ಡಾ.ಹರ್ಷ ವಿವರಿಸಿದರು.
ಟ್ರಾಫಿಕ್ ನಿಟ್ಟಿನಲ್ಲಿ 13 ಕಾಮಗಾರಿ
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಸ್ತುತ ಟ್ರಾಫಿಕ್ ನಿಟ್ಟಿನಲ್ಲಿ 13 ಕಾಮಗಾರಿಗಳು ನಡೆಯುತ್ತಿವೆ. ಆರ್ಯ ಸಮಾಜ ರಸ್ತೆಗೆ ಕಾಂಕ್ರಿಟ್, ಪಿವಿಎಸ್- ಬಂಟ್ಸ್ ಹಾಸ್ಟೆಲ್ ರಸ್ತೆ ಅಗಲೀಕರಣ, ಯು.ಪಿ. ಮಲ್ಯ ರಸ್ತೆಯಿಂದ ನೆಹರೂ ಮೈದಾನ್ ರಸ್ತೆಗೆ ಪಾದಚಾರಿ ಸುರಂಗ ಮಾರ್ಗ ನಿರ್ಮಾಣ, ಕ್ಲಾಕ್ ಟವರ್ ಜಂಕ್ಷನ್ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಫುಟ್ಪಾತ್ ಅಭಿವೃದ್ಧಿ, ಬ್ರಿಡ್ಜ್ ರಸ್ತೆ (ಗೋಲ್ಡ್ ಫಿಂಚ್ ಬಳಿಯಿಂದ ಬಲ್ಮಠ ತನಕ) ಕಾಂಕ್ರಿಟ್, ನ್ಯೂ ಪಾಂಡೇಶ್ವರ ರಸ್ತೆ (ಓಲ್ಡ್ ಕೆಂಟ್ ರಸ್ತೆ, ಹೊಯಿಗೆ ಬಜಾರ್ ರಸ್ತೆ, ಮಹಾಲಿಂಗೇಶ್ವರ ಟೆಂಪಲ್ರಸ್ತೆ), ಭಾರತ್ ಬೀಡಿ ರಸ್ತೆಯಲ್ಲಿ ಫುಟ್ಪಾತ್ ಕಾಮಗಾರಿ, ಅತ್ತಾವರ ರಸ್ತೆಯಲ್ಲಿ ಫುಟ್ಪಾತ್ ಅಭಿವೃದ್ಧಿ, ನೆಲ್ಲಿಕಾಯಿ ರಸ್ತೆ ಮತ್ತು ಅಝೀಝುದ್ದೀನ್ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿ, ಕ್ಲಾಟ್ ಟವರ್, ಲೇಡಿಹಿಲ್ ವೃತ್ತ, ಲಾಲ್ ಬಾಗ್ ವೃತ್ತ ಕಾಮಗಾರಿ ನಡೆಯುತ್ತಿದೆ.
ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುವಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿ ಸೂಚನಾ ಲಕ ಅಳಡಿಸುವುದು, ಪರ್ಯಾಯ ಮಾರ್ಗಗಳ ಹೊಂಡ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವುದು, ಎಸ್.ಪಿ. ವೃತ್ತದಿಂದ ಲೇಡಿಗೋಶನ್ವರೆಗಿನ ರಸ್ತೆಯ ಗುಂಡಿ ಮುಚ್ಚುವುದು, ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತದ ತನಕ ಸುಗಮ ಸಂಚಾರದ ದೃಷ್ಟಿಯಿಂದ ಬಲ ಬದಿಯ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದು ಪಡಿಸುವುದು, ಹ್ಯಾಮಿಲ್ಟನ್ ವೃತ್ತ, ರಾವ್ ಆ್ಯಂಡ್ ರಾವ್ ವೃತ್ತ ಹಾಗೂ ಕ್ಲಾಕ್ ಟವರ್ ವರೆಗಿನ ರಸ್ತೆಯ ಬದಿ ಇರುವ ಬೀದಿ ಬದಿ ವ್ಯಾಪಾರಿಗಳನ್ನು ಕಡ್ಡಾಯವಾಗಿ ತೆರವು ಮಾಡುವಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಡಾ. ಹರ್ಷ ಪಿ.ಎಸ್. ತಿಳಿಸಿದರು.
ನಗರದ ಸರ್ವೀಸ್ ರಸ್ತೆಗಳನ್ನು ಅಭಿವೃದ್ಧಿಗೊಳಿಸುವುದು, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುವಲ್ಲಿ ಕಾಮಗಾರಿ ಆರಂಭಿಸುವ ಮತ್ತು ಮುಕ್ತಾಯದ ದಿನಾಂಕ, ಕಾಮಗಾರಿಯ ವೆಚ್ಚ, ಕಂಟ್ರಾಕ್ಟುದಾರರ ಹೆಸರು ಮತ್ತು ಮೊಬೈಲ್ ನಂಬ್ರ ನಮೂದಿಸಿದ ಸೂಚನಾ ಲಕ ಹಾಕುವುದು, ಬ್ಯಾರಿಕೇಡ್ ಹಾಕಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಕಾಮಗಾರಿಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸುವಂತೆ ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕು ಎಂದು ಕೋರಲಾಗಿದೆ ಎಂದು ಡಾ. ಹರ್ಷ ವಿವರಿಸಿದರು.