ಸಂವಿಧಾನ ಉಳಿಸಲು ದಲಿತರು ರಾಜಕೀಯ ಶಕ್ತಿಯಾಗಬೇಕು : ಜಯನ್ ಮಲ್ಪೆ
ಉಡುಪಿ, ಡಿ.6: ದೇಶದ ಒಂದು ವರ್ಗ ಸಂವಿಧಾನದ ಮೇಲೆ ದಬ್ಬಾಳಿಕೆ ಮಾಡಲು ಅವರ ಕೈಯಲ್ಲಿರುವ ಅಧಿಕಾರವೇ ಕಾರಣ. ಅವರ ಅಧಿಕಾರವನ್ನು ನಾಶಮಾಡಲು ದಲಿತರು ರಾಜಕೀಯ ಶಕ್ತಿಯಾಗಿ ಅಧಿಕಾರ ಪಡೆಯಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಶುಕ್ರವಾರ ಉಡುಪಿ ಶ್ರೀಸಾಯಿ ಸಭಾಂಗಣದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಸಂವಿಧಾನ ಪಿತಾಮಹ ಡಾ.ಬಿ.ಆರ್. ಅಂಬೇಡ್ಕರ್ ಅವರ 63ನೇ ಪರಿನಿರ್ವಾಣ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನದ ಆಶಯಗಳನ್ನು ಸಂಪೂರ್ಣ ವಾಗಿ ಸೋಲಿಸಿ, ನಮ್ಮ ದೇಶವನ್ನು ಜಗತ್ತಿನಲ್ಲೆ ಅತ್ಯಂತ ಬಡ ಭಿಕ್ಷುಕ ದೇಶವನ್ನಾಗಿ ಮಾಡಿದ್ದಾರೆ. ಈ ನಾಡನ್ನು ರಾಜ್ಯಾಂಗದ ಆಶಯಗಳಂತೆ ಸುಖೀರಾಜ್ಯವನ್ನಾಗಿ ಪರಿವರ್ತಿಸ ಬೇಕಾದರೆ ದಲಿತರು ತಮ್ಮ ಸ್ವಂತ ಶಕ್ತಿಯಿಂದ ದೇಶದ ರಾಜ್ಯಾಧಿಕಾರವನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಅಂಬೇಡ್ಕರ್ರನ್ನು ಓದಿಕೊಂಡ ಮಾತ್ರಕ್ಕೆ ಯಾರೂ ಅಂಬೇಡ್ಕರ್ವಾದಿ ಗಳಾಗುವುದಿಲ್ಲ. ಅಂಬೇಡ್ಕರ್ ತತ್ವವನ್ನು ಕಾಯಾ ವಾಚಾ ಮನಸಾ ಪ್ರಜ್ಞಾಪೂರ್ವಕವಾಗಿ ಬದುಕಿನ ಭಾಗವಾಗಿ ರೂಪಿಸಿಕೊಳ್ಳುವವರು ಮಾತ್ರವೇ ಅಂಬೇಡ್ಕರ್ವಾದಿಗಳಾಗಲು ಸಾದ್ಯ.ಅಪ್ಪಟ ಪ್ರಜಾಪ್ರುತ್ವವಾದಿಯಾದ ಅಂಬೇಡ್ಕರ್, ಸ್ಥಿತಪ್ರಜ್ಞತೆ, ಗಾಂಭೀರ್ಯ, ತಾಳ್ಮೆ, ಸಹನೆಯ ವ್ಯಕ್ತಿತ್ವವನ್ನು ರೂಪಿಸಿ ಕೊಂಡವರು. ಬುದ್ಧನ ಅನುಯಾಯಿಯಾಗಿ ಅಹಿಂಸಾ ತತ್ವವನ್ನು ಕರಗತ ಮಾಡಿಕೊಂಡು ಅದನ್ನು ಪ್ರಜ್ಞಾಪೂರ್ವಕವಾಗಿ ಜೀವನದಲ್ಲಿ ಅಳವಡಿಸಿ ಕೊಂಡವರು ಮಾತ್ರ ಅಂಬೇಡ್ಕರ್ವಾದಿಗಳಾಗುತ್ತಾರೆ ಎಂದು ಜಯನ್ ಮಲ್ಪೆ ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಗುಣವಂತ ತೊಟ್ಟಂ, ಅನೀಲ್ ಅಂಬಲಪಾಡಿ, ಸಂತೋಷ್ ಕಪ್ಪೆಟ್ಟು, ದಿನೇಶ್ ಜವಣೆರಕಟ್ಟೆ, ಸುರೇಶ್ ಪಾಲನ್, ಪ್ರಸಾದ್ ಮಲ್ಪೆ, ಮಹೇಶ್ ಚೆಂಡ್ಕಳ, ಸುಕೇಶ್ ಪುತ್ತೂರು ಅಶೋಕ್ ನಿಟ್ಟೂರು ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಭಗವನ್ ಮಲ್ಪೆ ಸ್ವಾಗತಿಸಿ, ಅರುಣ ನೆರ್ಗಿ ವಂದಿಸಿದರು. ಮಂಜುನಾಥ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿದರು.