2020ರಲ್ಲಿ ಧರ್ಮಪ್ರಾಂತದಿಂದ ಬಡವರಿಗೆ ಮನೆ ನಿರ್ಮಾಣ: ಬಿಷಪ್
ಉಡುಪಿ, ಡಿ.20: 2020ರಲ್ಲಿ ಉಡುಪಿ ಧರ್ಮಪ್ರಾಂತದ ವತಿಯಿಂದ ಜಿಲ್ಲೆಯಲ್ಲಿ ಸ್ವಂತ ಜಾಗವುಳ್ಳ ಆದರೆ ಪಕ್ಕಾ ಮನೆ ಇರದ ಬಡವರಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದ್ದೇವೆ ಎಂದು ಉಡುಪಿ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದ್ದಾರೆ.
ಶೋಕಮಾತಾ ಇಗರ್ಜಿಯ ಆವರಣದಲ್ಲಿರುವ ಬಿಷಪ್ ಹೌಸ್ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಮಿತ್ರರೊಂದಿಗಿನ ಕ್ರಿಸ್ಮಸ್ ಸ್ನೇಹಕೂಟದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡುತಿದ್ದರು.
2020ನೇ ವರ್ಷವನ್ನು ಬಡವರಿಗೆ ಅಗತ್ಯವುಳ್ಳು ಮೂಲಭೂತ ಸೌಕರ್ಯ ಒದಗಿಸುವ ವರ್ಷವಾಗಿ ವಿಶ್ವಸಂಸ್ಥೆ ಘೋಷಿಸಿದೆ. ಇದರಲ್ಲಿ ಬಡವರಿಗೆ ಮನೆ, ಆಹಾರ, ಬಟ್ಟೆ ಅಲ್ಲದೇ ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲು ತಿಳಿಸಲಾಗಿದೆ. ಅದರಂತೆ ಉಡುಪಿ ಧರ್ಮಪ್ರಾಂತದ ವತಿಯಿಂದ ಜಿಲ್ಲೆಯ ಸ್ವಂತ ಜಾಗವುಳ್ಳ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.
ಅಲ್ಲದೇ ಕ್ಯಾನ್ಸರ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ‘ಸ್ಪರ್ಶ’ ಕಾರ್ಯಕ್ರಮ ದಲ್ಲಿ ಕ್ಯಾನರ್ ತಪಾಸಣೆ, ಚಿಕಿತ್ಸೆ ಒದಗಿಸುವ ಜೊತೆಗೆ ಜಾಗೃತಿಯನ್ನು ಜಿಲ್ಲೆಯ ಜನರಲ್ಲಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದರು.
ಸಮಾಜದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಪ್ರತಿಯೊಬ್ಬರು ತನ್ನ ಕೊಡುಗೆಯನ್ನು ನೀಡಬೇಕಾಗಿದೆ ಈ ಮೂಲಕ ಶಾಂತಿಯುತ ಭಾರತ ಕಟ್ಟುವ ಕೆಲಸ ನಿರ್ಮಾಣವಾಗಬೇಕಾಗಿದೆ. ಜಗತ್ತಿನಲ್ಲಿಂದು ಅಶಾಂತಿ ತಾಂಡವವಾಡುತ್ತಿದ್ದು, ಪ್ರಭು ಏಸುವಿನ ಜನನ, ಬೋಧನೆಯ ಹಿಂದೆ ಶಾಂತಿಯ ಕಿರಣವಿದೆ. ಶಾಂತಿ ಇರುವಲ್ಲಿ ಭಾವೈಕ್ಯತೆ, ಸಹಬಾಳ್ವೆ, ಸಾಮರಸ್ಯ ಹಾಗೂ ಸಮಾಧಾನ ವಿರುತ್ತದೆ ಎಂದರು.
ಸಮಾಜದಲ್ಲಿ ಹೆಚ್ಚುತ್ತಿರುವ ಅಶಾಂತಿ, ಹಿಂಸೆ, ಗಲಭೆ, ಅತ್ಯಾಚಾರ, ಅನಾಚಾರ, ಬಡತನ, ಶೋಷಣೆ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಲಿ ಎಂದು ಡಾ.ಜೆರಾಲ್ಡ್ ಲೋಬೊ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಎಸ್ಪಿ ಕುಮಾರಚಂದ್ರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ದಿವಾಕರ ಹಿರಿಯಡ್ಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಬಾರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸುಬ್ರಹ್ಮಣ್ಯ ಜಿ.ಕುರ್ಯರನ್ನು ಸನ್ಮಾನಿಸಲಾಯಿತು.
ಶೋಕಮಾತಾ ಇಗರ್ಜಿಯ ಮುಖ್ಯ ಗುರುಗಳಾದ ವಲೇರಿಯನ್ ಮೆಂಡೋನ್ಸಾ ಉಪಸ್ಥಿತರಿದ್ದರು. ವಂ.ರಾಯಿಸನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ವಂ.ಚೇತನ್ ಲೋಬೊ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೈಕೆಲ್ ರಾಡ್ರಿಗಸ್ ವಂದಿಸಿದರು.