ಪೇಜಾವರ ಶ್ರೀ ನಿಧನ : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಬಿಷಪ್ ಸಂತಾಪ
ಉಡುಪಿ, ಡಿ.29: ಪೇಜಾವರ ಸ್ವಾಮೀಜಿಯ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸ್ವಾಮೀಜಿಯ ಅಗಲಿಕೆಯ ಸುದ್ದಿ ದುಃಖ ತಂದಿದೆ. ಹಿಂದೂ ಧರ್ಮದ ಪ್ರಮುಖ ಸ್ವಾಮೀಜಿಯಾಗಿದ್ದ ಪೇಜಾವರರು ತಮ್ಮ ನಿಲುವನ್ನು ನೇರವಾಗಿ ವ್ಯಕ್ತಪಡಿಸುತ್ತಿದ್ದರು. ಅವರ ಅಗಲಿಕೆಯಿಂದಾಗಿ ಓರ್ವ ಹಿರಿಯ ಧರ್ಮದರ್ಶಿ ಯನ್ನು ಕಳೆದು ಕೊಂಡಂತಾಗಿದೆ ಎಂದು ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಬಿಷಪ್ ಸಂತಾಪ
ಅಷ್ಟ ಮಠದ ಹಿರಿಯ ಯತಿ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಸಂತ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ವಿಧಿವಶರಾದ ಸುದ್ಧಿ ನಮಗೆ ಆಘಾತ ಉಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಲೋಬೊ ಸಂತಾಪ ವ್ಯಕ್ತಪಡಿಸಿದ್ದಾರೆ.
ತನ್ನ ಧರ್ಮವನ್ನು ಪ್ರೀತಿಸಿ ಇತರ ಧರ್ಮಗಳನ್ನು ಗೌರವಿಸುವ ನಿಟ್ಟಿನಲ್ಲಿ ಸ್ವಾಮೀಜಿ ಆದರ್ಶಪ್ರಾಯವಾಗಿದ್ದರು. ಅವರು ಈ ಶತಮಾನ ಕಂಡ ಮಹಾನ್ ಯತಿಗಳು ಎನ್ನುವುದು ಖಚಿತ. ಶ್ರೀಗಳ ನಿರ್ಗಮನದಿಂದ ಉಡುಪಿ ಕ್ರೈಸ್ತ ಧರ್ಮಪ್ರಾಂತವು ದುಃಖಿತವಾಗಿದೆ. ಅವರ ಜೀವಿಸಿದ ಮೌಲ್ಯ ಗಳು ಚಿರಕಾಲ ಬಾಳಬೇಕು ಎಂದು ಬಿಷಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.