ಮಂಗಳೂರು ಗೋಲಿಬಾರ್: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಜ.2ರಂದು ಸಾಮೂಹಿಕ ಧರಣಿ
ಮಂಗಳೂರು, ಡಿ. 31: ನಗರದಲ್ಲಿ ಡಿ. 19ರಂದು ನಡೆದ ಪೊಲೀಸ್ ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಲು ಆಗ್ರಹಿಸಿ ಜ.2ರಂದು ಸಾಮೂಹಿಕ ಧರಣಿಯನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಪುರಭವನದ ಆವರಣದೊಳಗೆ ಇರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷ, ಸಂಘಟನೆಗಳ ಜಂಟಿ ಆಶ್ರಯದಲ್ಲಿ ಈ ಸಾಮೂಹಿಕ ಧರಣಿ ಯನ್ನು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷ, ಸಂಘಟನೆಗಳ ನಿಯೋಗದ ವತಿಯಿಂದ ನಗರದ ಖಾಸಗಿ ಹೊಟೇಲ್ನಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಠಿಚಾರ್ಜ್, ಗೋಲಿಬಾರ್ಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ಮೇಲೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು. ಗೋಲಿಬಾರ್ಗೆ ಬಲಿಯಾದ ಇಬ್ಬರು ಅಮಾಯಕರ ಕುಟುಂಬಕ್ಕೆ ಸರಕಾರ ಈ ಹಿಂದೆ ಘೋಷಿಸಿದಂತೆ ಪರಿಹಾರ ನೀಡಬೇಕು. ಗೋಲಿಬಾರ್ನಲ್ಲಿ ಗಾಯಗೊಂಡವರಿಗೂ ಪರಿಹಾರ ನೀಡಬೇಕು. ಕಲ್ಲು ತೂರಾಟ, ಹಿಂಸಾಚಾರ ಪ್ರಕರಣವನ್ನು ಮುಂದಿಟ್ಟು, ಬಂಧಿಸಲಾಗಿರುವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎನ್ಆರ್ಸಿ, ಸಿಎಎ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳಿಗೆ ಅನುಮತಿ ನೀಡುವಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಅನುಸರಿಸಿದ ತಾರತಮ್ಯ ನೀತಿ, ಅನಗತ್ಯವಾಗಿ ನಿಷೇಧಾಜ್ಞೆ ಹೇರಿ ಗೊಂದಲಗಳಿಗೆ ಕಾರಣವಾಗಿತ್ತು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ನಡೆದ ಪ್ರತಿಭಟನೆಗಳನ್ನು ಪೊಲೀಸ್ ಇಲಾಖೆ ಶಾಂತಿಯುತವಾಗಿ ನಿರ್ವಹಿಸಿದರೆ, ಮಂಗಳೂರಿನಲ್ಲಿ ಮಾತ್ರ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಲಾಗಿತ್ತು. ಇದೇ ಮುಂದಿನ ಎಲ್ಲಾ ಅಹಿತಕರ ಘಟನೆ ಗಳಿಗೆ ಕಾರಣವಾಯಿತು ಎಂದರು.
ಗೋಲಿಬಾರ್ ನಡೆದ ಬಳಿಕ ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ಅವರು ನೀಡಿದ ಪ್ರತಿಭಟನಾಕಾರರ ಸಂಖ್ಯೆ, ಶಸ್ತ್ರಾಸ್ತ್ರಗಳ ಲೂಟಿಗೆ ಯತ್ನ ಮುಂತಾದ ತಪ್ಪಾದ ಮಾಹಿತಿಗಳು, ಆಯ್ದ ಸಿಸಿ ಕೆಮರಾ ಫೂಟೇಜ್ಗಳನ್ನು ಮಾತ್ರ ಬಹಿರಂಗಪಡಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಈ ಪ್ರಕರಣದಲ್ಲಿ ವಿರೋಧ ಪಕ್ಷಗಳ ಪಾತ್ರ ಇದೆ ಎಂದು ರಾಜ್ಯದ ಗೃಹ ಸಚಿವರು ಸಹಿತ ಮುಖ್ಯಮಂತ್ರಿಗಳು ಆರೋಪ ಮಾಡಿದ್ದಾರೆ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದ ಈ ಪ್ರಕರಣವನ್ನು ಉಚ್ಛನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಸಿಪಿಐಎಂ ರಾಜ್ಯ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಪಿ.ವಿ. ಮೋಹನ್, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರವಿ ಕಿರಣ ಪುಣಚ, ಡಿಎಸ್ಎಸ್ ಡಾ. ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ, ಪ್ರಮುಖರಾದ ಯಾದವ ಶೆಟ್ಟಿ, ಎಸ್.ಪಿ. ರಾವ್, ಕರುಣಾಕರ್, ಸಂತೋಷ್ ಬಜಾಲ್ ಉಪಸ್ಥಿತರಿದ್ದರು.