ವೆನ್ಲಾಕ್ನಲ್ಲಿ ಸಮುದಾಯ ಸಹಾಯ ಕೇಂದ್ರ ಲೋಕಾರ್ಪಣೆ
ಮಂಗಳೂರು : ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಆಸ್ಪತ್ರೆಯ ವಿಭಾಗಗಳು, ಮೆಡಿಕಲ್, ವಾರ್ಡ್ಗಳು, ಬ್ಲಡ್ ಬ್ಯಾಂಕ್ ಸೌಲಭ್ಯ ಸಹಿತ ಹಲವು ಸಹಾಯ-ಸಹಕಾರ ನೀಡಲು ಸಮುದಾಯ ಸಹಾಯ ಕೇಂದ್ರವನ್ನು ಆರಂಭಿಸಲಾಗಿದ್ದು, ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಸಚಿವರು, ವೆನ್ಲಾಕ್ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ರೋಗಿಗಳು ಬರುತ್ತಾರೆ. ವೈದ್ಯರು, ಚಿಕಿತ್ಸೆಯ ಸೌಲಭ್ಯಗಳ ಬಗ್ಗೆ ಸಹಾಯ ಕೇಂದ್ರ ಸಲಹೆ ನೀಡಲಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಇಲ್ಲಿ ವೈದ್ಯರು, ನರ್ಸ್ಗಳ ಕೊರತೆ ಇದೆ. ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಾಗುವುದು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪಾರದರ್ಶಕ ಸೇವೆ ನೀಡಲು ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಸಮುದಾಯ ಜಿಲ್ಲಾ ಆಸ್ಪತ್ರೆಗೆ ಸಾವಿರಾರು ಜನರು ಬರುತ್ತಾರೆ. ಹಲವರಿಗೆ ಇಲ್ಲಿನ ಮಾಹಿತಿ ಇರಲ್ಲ. ಅಂತಹವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಮುದಾಯ ಸಹಾಯ ಕೇಂದ್ರ ತೆರೆಯಲಾಗಿದೆ. ಇದೊಂದು ನೂತನ ಸೇವಾ ಯೋಜನೆಯಾಗಿದೆ. ಆಸ್ಪತ್ರೆಯಲ್ಲಿ ಸೂಚನಾ ನಾಮಫಲಕಗಳನ್ನು ಅಳವಡಿಸಲಾಗುವುದು ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯ ಸಹಾಯ ಕೇಂದ್ರದ ಸ್ವಯಂ ಸೇವಕರು ಹಾಗೂ ವಿಶ್ವವಿದ್ಯಾಲಯದ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ಜಾಕೆಟ್ಗಳನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ದ.ಕ. ಘಟಕದ ಚೇರ್ ಮ್ಯಾನ್ ಸಿಎ ಶಾಂತಾರಾಮ ಶೆಟ್ಟಿ, ವೆನ್ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ವಿವಿ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ, ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಪ್ರಭಾಕರ್ ಶರ್ಮ ಉಪಸ್ಥಿತರಿದ್ದರು. ವೆನ್ಲಾಕ್ನ ಬಸವರಾಜ್ ಪ್ರಾರ್ಥಿಸಿದರು. ಡಾ. ಗಣಪತಿ ಗೌಡ ಕಾರ್ಯಕ್ರಮ ನಿರೂಪಿಸಿದರು.