ದಿಲ್ಲಿಯಲ್ಲಿ ಮೂರು ಆಶ್ರಯ ತಾಣಗಳಿಗೆ ಬೆಂಕಿ ಹಚ್ಚಿದ ವಲಸೆ ಕಾರ್ಮಿಕರು: ಆರು ಜನರ ಬಂಧನ
ಹೊಸದಿಲ್ಲಿ, ಎ.12: ದಿಲ್ಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿಯ ಮೂರು ಆಶ್ರಯ ತಾಣಗಳಿಗೆ ಶನಿವಾರ ವಲಸೆ ಕಾರ್ಮಿಕರು ಬೆಂಕಿ ಹಚ್ಚಿದ್ದು,ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಆಹಾರಕ್ಕೆ ಸಂಬಂಧಿಸಿದಂತೆ ಆಶ್ರಯ ತಾಣಗಳ ಸಿಬ್ಬಂದಿಗಳೊಂದಿಗೆ ಜಗಳವಾಡಿದ್ದ ವಲಸೆ ಕಾರ್ಮಿಕರು ಅವರನ್ನು ಥಳಿಸಿದ್ದರು. ನಂತರ ನಾಲ್ವರು ಕಾರ್ಮಿಕರು ಯಮುನಾ ನದಿಗೆ ಹಾರಿದ್ದು, ಈ ಪೈಕಿ ಓರ್ವ ಮೃತಪಟ್ಟಿದ್ದಾನೆ. ಶನಿವಾರ ಬೆಳಿಗ್ಗೆ ಆತನ ಶವ ಪತ್ತೆಯಾಗಿದೆ.
ಹೆಚ್ಚುತ್ತಿರುವ ಕೊರೋನ ವೈರಸ್ ಪಿಡುಗಿನ ನಡುವೆ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯವ ನ್ನೊದಗಿಸಲು ಈ ಆಶ್ರಯ ತಾಣಗಳನ್ನು ಸ್ಥಾಪಿಸಲಾಗಿದೆ.
ಸಹಕಾರ್ಮಿಕನ ಸಾವಿನ ಕುರಿತು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕಾಗಿ ಶನಿವಾರ ಆಗ್ರಹಿಸಿದ್ದ ವಲಸೆ ಕಾರ್ಮಿಕರು ಹಿಂಸಾಚಾರಕ್ಕಿಳಿದು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರು ಮತ್ತು ಆಶ್ರಯ ತಾಣಗಳಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕಾರ್ಮಿಕರ ಬಟ್ಟೆಗಳು,ಫೋನ್ ಇತ್ಯಾದಿಗಳು ಬೆಂಕಿಯಿಂದ ಸುಟ್ಟು ಹೋಗಿದ್ದು,ಸರಕಾರವು ಅವರಿಗೆ ಪರ್ಯಾಯ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ.