ಅತಂತ್ರ ವಲಸೆ ಕಾರ್ಮಿಕರ ಕುರಿತು ಮಾಹಿತಿಗಳ ಸಲ್ಲಿಕೆಗೆ ಜಿಲ್ಲೆಗಳಿಗೆ ಬಾಂಬೆ ಹೈಕೋರ್ಟ್ ನಿರ್ದೇಶ
ಮುಂಬೈ,ಎ.16: ಕೊರೊನ ವೈರಸ್ ಲಾಕ್ಡೌನ್ನಿಂದಾಗಿ ತಮ್ಮ ಜಿಲ್ಲೆಗಳಲ್ಲಿ ಅತಂತ್ರರಾಗಿರುವ ವಲಸೆ ಕಾರ್ಮಿಕರ ಮೂಲ ಅಗತ್ಯಗಳನ್ನು ಪೂರೈಸಲಾಗಿದೆಯೇ ಮತ್ತು ಅವರಿಗೆ ಮಾನಸಿಕ ತಜ್ಞರೊಂದಿಗೆ ಸಮಾಲೋಚನೆಗೆ ವ್ಯವಸ್ಥೆಯನ್ನು ಮಾಡಲಾಗಿ ದೆಯೇ ಎನ್ನುವುದು ಸೇರಿದಂತೆ ಎಲ್ಲ ಮಾಹಿತಿಗಳನ್ನೊಂಡ ವರದಿಗಳನ್ನು ಎರಡು ವಾರಗಳಲ್ಲಿ ಸಿದ್ಧಪಡಿಸಿ ಮೇ 4ರಂದು ತನಗೆ ಸಲ್ಲಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರ ಸ್ಥಿತಿಗತಿಯ ಕುರಿತು ಹಾಗೂ ವೈದ್ಯರು,ನರ್ಸ್ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿ ರುವ ನ್ಯಾ.ಆರ್.ವಿ.ಘುಗೆ ಅವರ ಪೀಠವು ಈ ನಿರ್ದೇಶವನ್ನು ಹೊರಡಿಸಿದೆ.
ಕೊರೋನ ವೈರಸ್ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು,ವೈದ್ಯಕೀಯ ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗಾಗಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡುವಂತೆಯೂ ಪೀಠವು ಜಿಲ್ಲಾಧಿಕಾರಿಗಳಿಗೆ ಸೂಚಿಸಿತು.
ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳಿಗೆ ಅವರ ವಸತಿ ಸೊಸೈಟಿಗಳಿಂದ ಮತ್ತು ನೆರೆಕರೆಯವರಿಂದ ತೊಂದರೆಗಳಾಗುತ್ತಿ ರುವ ಹಲವಾರು ನಿದರ್ಶನಗಳಿವೆ ಎಂದು ನ್ಯಾ.ಘುಗೆ ಬೆಟ್ಟು ಮಾಡಿದರು.
ಇಂತಹ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸಲಾಗುವುದು ಎಂದು ಸರಕಾರಿ ವಕೀಲ ಡಿ.ಆರ್.ಕಾಳೆ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.