ಪಾದರಾಯನಪುರ: ಪೊಲೀಸ್ ಮುಖ್ಯ ಪೇದೆ ದಾದಾಪೀರ್ ಗೆ ಗಾಯ
ಬೆಂಗಳೂರು, ಎ.20: ಪಾದರಾಯನಪುರದಲ್ಲಿ ನಡೆದ ಗಲಾಟೆ ಆರೋಪ ಪ್ರಕರಣ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯ ಮುಖ್ಯ ಪೇದೆ ದಾದಾಪೀರ್ ಅವರಿಗೂ ಗಾಯಗಳಾಗಿವೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆ ಆರೋಪಿಗಳ ವಿರುದ್ಧ ಪಿಎಸ್ಸೈ ರಮನ್ ಗೌಡ, ದಾದಾಪೀರ್ ಸೇರಿದಂತೆ ಐವರು ನೀಡಿರುವ ದೂರಿನನ್ವಯ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಿಡಿಗೇಡಿಗಳ ಕೃತ್ಯದಿಂದ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಎಫ್ಐಆರ್ ನಲ್ಲಿ ಏನಿದೆ?: ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಎರಡು ವರ್ಷಗಳಿಂದ ಪೊಲೀಸ್ ಮುಖ್ಯ ಪೇದೆ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೋನ ಸೋಂಕು ಹಿನ್ನೆಲೆ ಇತ್ತೀಚಿಗೆ ಪಾದರಾಯನಪುರ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಇದರ ಅಂಗವಾಗಿ ಎ.19ರ ರಾತ್ರಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ 80 ಮಂದಿ ಗುಂಪು ಕಟ್ಟಿಕೊಂಡು, ಕಲ್ಲು, ಇತರೆ ಆಯುಧಗಳನ್ನು ಕೈಯಲ್ಲಿ ಹಿಡಿದು ನಮ್ಮ ಬಳಿ ಬಂದರು.
ಆದರೆ, ನಾವು ತಡೆಯಲು ಸಾಧ್ಯವಾಗಲಿಲ್ಲ. ಬಳಿಕ, ಆ ಗುಂಪಿನ ಸದಸ್ಯರು ನಗರದೊಳಗೆ ಹಾಕಲಾಗಿದ್ದು ಶಾಮಿಯಾನ, ಇತರೆ ವಸ್ತುಗಳನ್ನು ಧ್ವಂಸ ಮಾಡಿದರು. ತದನಂತರ, ನಮ್ಮ ಮೇಲೆ ದಾಳಿ ನಡೆಸಿದಾಗ ಗಾಯಗಳಾಗಿವೆ ಎಂದು ಎಫ್ಐಆರ್ ನಲ್ಲಿ ದಾದಾ ಪೀರ್ ತಿಳಿಸಿದ್ದಾರೆ.
ಕ್ರಮ ತೆಗೆದುಕೊಳ್ಳಿ: ಕೊರೋನ ಸೋಂಕು ತಡೆಗಟ್ಟುವ ಸಲುವಾಗಿ ಸರಕಾರ ಜಾರಿಗೊಳಿಸಿರುವ ಲಾಕ್ಡೌನ್ ಉಲ್ಲಂಘಿಸಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೇದೆ ದಾದಾಪೀರ್ ಎಫ್ಐಆರ್ ನಲ್ಲಿ ಆಗ್ರಹಿಸಿದ್ದಾರೆ.