3 ವಾರಗಳ ಕಾಲ ಅರ್ನಬ್ ಗೋಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮಹಾರಾಷ್ಟ್ರದ ಪಾಲ್ಘರ್ ಎಂಬಲ್ಲಿ ನಡೆದ ಮೂವರ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಟಿವಿ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಗಳಿಗೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರಿಗೆ ಕಠಿಣ ಕ್ರಮದಿಂದ ಮೂರು ವಾರಗಳ ವಿನಾಯಿತಿಯನ್ನು ಇಂದು ಸುಪ್ರೀಂ ಕೋರ್ಟ್ ನೀಡಿದೆ.
ಜಸ್ಟಿಸ್ ಡಿ. ವೈ. ಚಂದ್ರಚೂಡ್ ಹಾಗೂ ಜಸ್ಟಿಸ್ ಎಂ. ಆರ್. ಶಾ ಅವರ ಪೀಠವು ಕೇಂದ್ರ ಸರಕಾರ, ಮಹಾರಾಷ್ಟ್ರ, ಛತ್ತೀಸಗಢ, ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ಸರಕಾರ ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೂ ನೋಟಿಸ್ ಜಾರಿಗೊಳಿಸಿದೆ. ಈ ಎಲ್ಲಾ ರಾಜ್ಯಗಳಲ್ಲಿ ಗೋಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅರ್ನಬ್ ವಿರುದ್ಧ ನಾಗ್ಪುರ್ ನ ಸದರ್ ಪೊಲೀಸ್ ಠಾಣೆ ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ದಾಖಲಾದ ಎಫ್ಐಆರ್ ಕುರಿತಂತೆ ಕ್ರಮಕ್ಕೆ ನ್ಯಾಯಾಲಯ ತಡೆ ಹೇರಿದೆ. ನಾಗ್ಪುರ್ ನಲ್ಲಿ ದಾಖಲಾದ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಿರುವ ನ್ಯಾಯಾಲಯ ಅಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಅರ್ನಬ್ ಗೋಸ್ವಾಮಿ ಮತ್ತವರ ರಿಪಬ್ಲಿಕ್ ಟಿವಿ ಕಚೇರಿಗೆ ರಕ್ಷಣೆಯೊದಗಿಸುವಂತೆಯೂ ನ್ಯಾಯಾಲಯ ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ಎಪ್ರಿಲ್ 21ರಂದು ತಮ್ಮ ರಿಪಬ್ಲಿಕ್ ಟಿವಿ ಚಾನೆಲ್ ನ ಪ್ರೈಮ್ ಟೈಮ್ ಶೋನಲ್ಲಿ ದ್ವೇಷಯುಕ್ತ ಹೇಳಿಕೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾನಹಾನಿಗೈಯ್ಯುವಂತಹ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಹಲವೆಡೆ ಎಫ್ಐಆರ್ ದಾಖಲಾಗಿತ್ತು. ಇದಕ್ಕೆ ತಡೆಯಾಜ್ಞೆ ಕೋರಿ ಅರ್ನಬ್ ಗುರುವಾರ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು.