ದಿಲ್ಲಿಯ ಇತಿಹಾಸಕಾರ,ಲೇಖಕ ಮತ್ತು ಕವಿ ಆರ್.ವಿ.ಸ್ಮಿಥ್ ನಿಧನ
ಹೊಸದಿಲ್ಲಿ, ಎ.30: ಇತಿಹಾಸಕಾರ,ಲೇಖಕ ಮತ್ತು ಕವಿ ರೊನಾಲ್ಡ್ ವಿವಿಯನ್ ಸ್ಮಿಥ್(82) ಅವರು ಗುರುವಾರ ಬೆಳಿಗ್ಗೆ ದಿಲ್ಲಿಯಲ್ಲಿ ನಿಧನರಾದರು. ಗಲ್ಲಿಗಳು, ಬೀದಿಗಳು,ಮಾರುಕಟ್ಟೆಗಳು,ಸ್ಮಾರಕಗಳು ಮತ್ತು ಸ್ಮಶಾನಗಳು ಸೇರಿದಂತೆ ದಿಲ್ಲಿಯ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಸ್ಮಿಥ್ ಖ್ಯಾತರಾಗಿದ್ದರು.
1938ರಲ್ಲಿ ದಿಲ್ಲಿಯಲ್ಲಿ ಜನಿಸಿದ್ದ ಅವರು ಭಾರತದಲ್ಲಿ ಬ್ರಿಟಿಷ್ ರಾಜ್ ಸಂದರ್ಭದಲ್ಲಿ ಗ್ವಾಲಿಯರ್ ಆರ್ಮಿಯ ಕರ್ನಲ್ ಆಗಿದ್ದ ಸಾಲ್ವಾಡೋರ್ ಸ್ಮಿಥ್ ಅವರ ವಂಶಜರಾಗಿದ್ದರು. ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ 1956ರಲ್ಲಿ ವೃತ್ತಪತ್ರಿಕೆಗಳಿಗಾಗಿ ಬರೆಯಲು ಆರಂಭಿಸಿದ್ದರು. ಪಿಟಿಐನಲ್ಲಿಯೂ ಕೆಲಸ ಮಾಡಿದ್ದ ಅವರು 1996ಲ್ಲಿ ದಿ ಸ್ಟೇಟ್ಸ್ಮನ್ನ ಸುದ್ದಿ ಸಂಪಾದಕರಾಗಿ ನಿವೃತ್ತರಾಗಿದ್ದರು. ಅವರು ಡಝನ್ಗೂ ಅಧಿಕ ಕೃತಿಗಳನ್ನು ರಚಿಸಿದ್ದು,ಹೆಚ್ಚಿನವು ದಿಲ್ಲಿ ಮಹಾನಗರದ ಕುರಿತಾಗಿವೆ. ಎರಡು ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಾಮಾನ್ಯ ಜ್ಞಾನಕ್ಕಾಗಿ ರೋಟರಿ ಪ್ರಶಸ್ತಿ ಮತ್ತು ಪತ್ರಿಕೋದ್ಯಮಕ್ಕಾಗಿ ಕೋಲ್ಕತಾದ ಮೈಕೇಲ್ ಮಧುಸೂದನ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ಮಿಥ್ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.