ಲಾಕ್ಡೌನ್ ಎಫೆಕ್ಟ್: ಆತ್ಮಹತ್ಯೆ, ಹಸಿವಿನಿಂದ 300ಕ್ಕೂ ಅಧಿಕ ಸಾವು; ಅಧ್ಯಯನ ವರದಿ
ಹಸಿವಿನಿಂದ ಕನಿಷ್ಠ 40 ವಲಸೆ ಕಾರ್ಮಿಕರ ಸಾವು
ಹೊಸದಿಲ್ಲಿ, ಎ.21: ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಮಾರ್ಚ್ 19ರಿಂದ ಲಾಕ್ಡೌನ್ ಹೇರಿಕೆಯಾದ ಆನಂತರ ಹಸಿವು, ಆರ್ಥಿಕ ಮುಗ್ಗಟ್ಟು, ಬಳಲಿಕೆ, ಸಕಾಲದಲ್ಲಿ ಲಭ್ಯವಾಗದ ವೈದ್ಯಕೀಯ ಚಿಕಿತ್ಸೆ ಮತ್ತು ಲಾಕ್ಡೌನ್ ಉಲ್ಲಂಘನೆಗಾಗಿ ನಡೆದ ಪೊಲೀಸ್ ದೌರ್ಜನ್ಯ ಮತ್ತಿತರ ಕಾರಣಗಳಿಂದಾಗಿ 300ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಂಗ್ಲೀಷ್, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯ ಸುದ್ದಿಪತ್ರಿಕೆಗಳು ಹಾಗೂ ಸುದ್ದಿಜಾಲತಾಣಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಸಾಮಾಜಿಕ ಹೋರಾಟಗಾರರು ಹಾಗೂ ವಿದ್ವಾಂಸರ ತಂಡವೊಂದು ತಯಾರಿಸಿದ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಈ ಗುಂಪು ಪರಿಶೀಲಿಸಿದ 310 ಸಾವುಗಳ ಪೈಕಿ 73 ಆತ್ಮಹತ್ಯೆ ಪ್ರಕರಣಗಳಾಗಿವೆ. ‘‘ಲಾಕ್ಡೌನ್ ಸಂದರ್ಭ ಸೋಂಕಿನ ಭೀತಿ, ಒಬ್ಬಂಟಿತನ, ಸಂಚಾರದ ಸ್ವಾತಂತ್ರ್ಯಕ್ಕೆ ನಿರ್ಬಂಧ ಹಾಗೂ ಮದ್ಯದ ಅಲಭ್ಯತೆ ಕಾರಣಗಳಿಂದಾಗಿ ಗಣನೀಯ ಸಂಖ್ಯೆಯ ಸಾವುಗಳು ಸಂಭವಿಸಿವೆ’’ ಸಂಘಟನೆಯು ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಮೃತಪಟ್ಟ 310 ಮಂದಿಯ ಪೈಕಿ ಮದ್ಯ ಸೇವನೆ ಲಭ್ಯವಾಗದೆ ಅಸ್ವಸ್ಥರಾಗಿ 45 ಮಂದಿ ಅಸುನೀಗಿದ್ದಾರೆ. ಕೇರಳ, ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಹಲವಾರು ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಬಳಿಕ ದುಡಿಮೆ ಕಳೆದುಕೊಂ ಸುಮಾರು 40 ಮಂದಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಹಸಿವು, ಬಳಲಿಕೆ ಹಾಗೂ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಲಾಕ್ಜೌನ್ ಹೇರಿಕೆಯಾದ ಬೆನ್ನಲ್ಲೇ ಉದ್ಯಮಸಂಸ್ಥೆಗಳು, ಕಾರ್ಖಾನೆಗಳು ಮುಚ್ಚುಗಡೆಗೊಂಡಾಗ, ಭಾರೀ ಸಂಖ್ಯೆಯ ದಿನಗೂಲಿ ಕಾರ್ಮಿಕರು ದಿಢೀರನೇ ತಮ್ಮ ಜೀವನೋಪಾಯದ ಮಾರ್ಗವನ್ನು ಕಳೆದುಕೊಳ್ಳುವಂತಾಯಿತು. ಬರಿಗೈಯಲ್ಲಿ ನಗರದಲ್ಲಿ ಬದುಕು ಸಾಗಿಸಲು ಸಾಧ್ಯವಾಗದೆ ಕುಟುಂಬದೊಂದಿಗೆ ಹಳ್ಳಿಗಳಿಗ ವಲಸೆ ಹೋಗುವಂತಾಯಿತು. ದಿಲ್ಲಿ, ನೋಯ್ಡಾ, ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಮಂದಿ ವಲಸೆ ಕಾರ್ಮಿಕರು ಹೆದ್ದಾರಿಗಳಲ್ಲಿ ಕಾಲ್ನಡಿಗೆಯಲ್ಲಿ ನೂರಾರು ಮೈಲು ದೂರು ನಡೆದುಕೊಂಡೇ ತಮ್ಮ ಹಳ್ಳಿಗಳಿಗೆ ಪ್ರಯಾಣಿಸಿದ್ದರು.
ಸುಮಾರು 38 ಮಂದಿ ವಲಸೆ ಕಾರ್ಮಿಕರು ಸಕಾಲದಲ್ಲಿ ವೈದ್ಯಕೀಯ ನೆರವು ಲಭಿಸದೆ ಕೊನೆಯುಸಿರೆಳೆದಿದ್ದಾರೆ. ಕನಿಷ್ಠ 40 ಮಂದಿ ಹಸಿವು ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಸಾವನ್ನಪ್ಪಿದ್ದಾರೆ. 20 ಮಂದಿ, ಹಳ್ಳಿಗಳಲ್ಲಿರುವ ತಮ್ಮ ಮನೆಗಳಿಗೆ ವಾಪಸಾಗಲು ಕಾಲ್ನಡಿಗೆಯಲ್ಲಿ ದೀರ್ಘ ದೂರ ಸಾಗಿದ್ದರಿಂದ ಅಥವಾ ಪಡಿತರ ಆಹಾರಕ್ಕಾಗಿ ಅಥವಾ ಹಣ ಪಡೆಯಲು ತಾಸುಗಟ್ಟಲೆ ಸರತಿ ಸಾಲುಗಳಲ್ಲಿ ನಿಂತಿದ್ದಾಗ ಪ್ರಾಣಕಳೆದುಕೊಂಡಿದ್ದಾರೆ.
ಲಾಕ್ಡೌನ್ನ ನಿಯಮಗಳನ್ನು ಉಲ್ಲಂಘಿಸಿದ್ದರೆಂಬ ಕಾರಣಗಳಿಗಾಗಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ 11 ಮಂದಿ ಸಾವಿಗೀಡಾಗಿದ್ದಾರೆಂದು ವರದಿ ಹೇಳಿದೆ.
ಜಿಂದಾಲ್ ಗ್ಲೋಬಲ್ ಸ್ಕೂಲ್ ಆಫ್ ಲಾದ ಸಹಾಯಕ ಕಾನೂನು ಪ್ರೊಫೆಸರ್ಅಮಾನ್, ಸಂಶೋಧಕಿ ಹಾಗೂ ಪಿಎಚ್ಡಿ ಪದವೀಧರೆ ಕನಿಕಾ ಮತ್ತು ಬೆಂಗಳೂರು ಮೂಲದ ಎಂಜಿನಿಯರ್ ತೇಜೇಶ್ ಜಿ.ಎನ್. ಅವರನ್ನೊಳಗೊಂಡ ತಂಡವು ಈ ದತ್ದಾಂಶಗಳನ್ನು ಸಂಗ್ರಹಿಸಿ ವರದಿ ತಯಾರಿಸಿದೆ.
ಲಾಕ್ಡೌನ್ನ ಯಶಸ್ಸು ಹಾಗೂ ವೈಫಲ್ಯಗಳನ್ನು ಅಂದಾಜಿಸುವ ಈ ಸಾವಿನ ಪ್ರಕರಣಗಳನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕೆಂದು ಅಮಾನ್ ತಿಳಿಸಿದ್ದಾರೆ. ಕೋವಿಡ್-19ಗೆ ಸಂಬಂಧಿಸಿದ ಸಾವಿನ ಪ್ರಕರಣಗಳ ಬಗ್ಗೆಯೇ ಈಗ ಗಮನಹರಿಸುತ್ತಿರುವಾಗ, ಇತರ ಕಾರಣಗಳಿಂದ ಸಂಭವಿಸಿದ ಸಾವಿನ ಘಟನೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.