ಕೋವಿಡ್-19 ಪ್ರಕರಣ: ಕರ್ತವ್ಯದ ವೇಳೆ ಪೊಲೀಸರು ಎಚ್ಚರ ವಹಿಸಿ- ಭಾಸ್ಕರ್ ರಾವ್
ಬೆಂಗಳೂರು, ಜೂ.16: ಲಾಕ್ಡೌನ್ ಸಡಿಕೆ ಹಿನ್ನೆಲೆ ದಿನೇ ದಿನೇ ಜನದಟ್ಟಣೆ ಹಾಗೂ ಕೋವಿಡ್-19 ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಸಿಬ್ಬಂದಿ ಎಚ್ಚರವಹಿಸಿ ಕಾರ್ಯ ನಿರ್ವಹಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆಯಾದ ನಂತರ ಆರೋಪಿಗಳ ಬಂಧನ, ಕಂಟೈನ್ಮೆಂಟ್ ಝೋನ್ ಕರ್ತವ್ಯ ನಿರ್ವಹಿಸುತ್ತಿದ್ದ ಇಲಾಖೆಯ 13 ಪೊಲೀಸರಿಗೆ ಕೊರೋನ ಸೋಂಕು ತಗಲಿದ್ದು, ಚಿಕಿತ್ಸೆಗೊಳಗಾದ ಮೂವರು ಪೊಲೀಸ್ ಸಿಬ್ಬಂದಿ ಮನೆಗೆ ಮರಳಿದರೆ, ಓರ್ವರು ಮೃತಪಟ್ಟಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಎಂದಿನಂತೆ ಜನದಟ್ಟಣೆ ಜಾಸ್ತಿಯಾಗಿದ್ದು, ಸದ್ಯ ಅಂತರ್ ರಾಜ್ಯದಿಂದ ಬರುವುದಕ್ಕೆ ಅವಕಾಶವಿದೆ. ಹೀಗಾಗಿ, ಎಲ್ಲೆಡೆ ಸಂಚಾರವೂ ಹೆಚ್ಚಾಗುತ್ತಿದೆ. ಹೀಗಾಗಿ, ಕಾರ್ಯನಿರ್ವಹಿಸಿರುವ ಪೊಲೀಸರು ಮುಂಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ಕೋವಿಡ್-19 ಕಾರಣ ಪೊಲೀಸರು ಎಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬಳಕೆ ಕಡ್ಡಾಯವಾಗಿದೆ. ಇದರ ಬಗ್ಗೆ ಆಯಾ ಠಾಣೆ ಇನ್ಸ್ಪೆಕ್ಟರ್ ಜವಾಬ್ದಾರಿ ಹೊತ್ತು ಪ್ರತಿ, ಸಿಬ್ಬಂದಿಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದು ಭಾಸ್ಕರ್ ರಾವ್ ತಿಳಿಸಿದರು.