ಅಕ್ರಮ ದೇವಸ್ಥಾನ ನಿರ್ಮಾಣ ತೆರವಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜೂ.18: ಯಲಹಂಕ ಉಪನಗರ ಸಿಎಚ್ಎಸ್ ಲೇಔಟ್ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ದೇವಾಲಯ ತೆರವಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಪಾರ್ಕ್ಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ದೇವಾಲಯ ನಿರ್ಮಿಸಲಾಗುತ್ತಿದೆ ಎಂದು ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕೆಎಂಸಿ ಕಾಯ್ದೆ 321ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚನೆ ನೀಡಿತು.
ಈ ವೇಳೆ ಪಾಲಿಕೆ ಪರ ವಕೀಲರು, ದೇವಸ್ಥಾನದ ಟ್ರಸ್ಟ್ ಗೆ ನೋಟಿಸ್ ನೀಡಿ, ವಿವರಣೆ ಕೇಳಿರುವುದಾಗಿ ಪೀಠಕ್ಕೆ ವಿವರಣೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಟ್ರಸ್ಟ್ ಗೆ ಬರೀ ನೋಟಿಸ್ ನೀಡಿದರೆ ಆಗುವುದಿಲ್ಲ. ಕಾನೂನು ಬಾಹಿರ ಕಾಮಗಾರಿಯಾಗಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ಕಟ್ಟಡ ತೆರವು ಮಾಡಲು ಮುಂದಾಗಬೇಕು ಎಂದು ಸೂಚಿಸಿತು.
ಅಲ್ಲದೆ, ಜು.6ರೊಳಗೆ ಕ್ರಮ ತೆಗೆದುಕೊಂಡು ಆ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.