ಕೊರೋನ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಜೂ. 23: ಕೊರೋನ ಸೋಂಕಿತರಿಗೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಜೊತೆಗೆ ಸ್ಟಾಂಡರ್ಡ್ ಟ್ರೀಟ್ಮೆಂಟ್ ಪ್ರೊಟೋಕಾಲ್ ಜಾರಿಗೆ ತರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಂಗಳವಾರ ರಾಜ್ಯ ಸರಕಾರ ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಸ್ಟಾಂಡರ್ಡ್ ಟ್ರೀಟ್ಮೆಂಟ್ ಪ್ರೊಟೋಕಾಲ್ ಜಾರಿಯಾಗುತ್ತಿರುವ ಬಗ್ಗೆ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸರಣಿ ವೈಫಲ್ಯಗಳಿಂದಾಗಿ ಕೊರೋನ ಸೋಂಕು ತೀವ್ರಗತಿಯಲ್ಲಿ ಏರುತ್ತಿದೆ. ಪ್ರಧಾನಿ ಪೂರ್ವ ಸಿದ್ಧತೆ ಇಲ್ಲದೆ, ಮಾರ್ಚ್ 24ರಂದು ರಾತ್ರಿ ಲಾಕ್ಡೌನ್ ಘೋಷಣೆ ಮಾಡಿದ್ದು, ಅನಂತರ ನಡೆದದ್ದು ಎಲ್ಲರಿಗೂ ಗೊತ್ತಿದೆ. ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಅಗತ್ಯವೇ ಇರಲಿಲ್ಲ. ಅವಿವೇಕಿತನದ ತೀರ್ಮಾನದಿಂದಾಗಿ ಕೋಟ್ಯಂತರ ಕಾರ್ಮಿಕರು, ಕುಶಲಕರ್ಮಿ ಸಮುದಾಯಗಳು, ರೈತಾಪಿ ವರ್ಗದವರು ಕಷ್ಟಪಟ್ಟರು ಎಂದು ವಿಷಾದ ವ್ಯಕ್ತಪಡಿಸಿದರು.
ಗರಿಷ್ಟ ಮೊತ್ತದ ನೋಟು ರದ್ದತಿ, ಜಿಎಸ್ಪಿಗಳ ಅಸಮರ್ಪಕ ಅನುಷ್ಟಾನದಿಂದ ಲಕ್ವಾ ಹೊಡೆದಂತಾಗಿದ್ದ ದೇಶದ ಆರ್ಥಿಕತೆಗೆ ಲಾಕ್ಡೌನ್ನಿಂದಾಗಿ ಉತ್ಪಾದಕ ವಲಯಗಳು ಇದ್ದಬದ್ದ ಚೈತನ್ಯವನ್ನು ಕಳೆದುಕೊಂಡಿವೆ. ಕೊರೋನ ಸೋಂಕು ಸಮುದಾಯದ ಸೋಂಕಾಗಿ ವ್ಯಾಪಿಸಿಕೊಂಡಿದೆ. ಸರಿಯಾದ ತಪಾಸಣೆಗಳು ನಡೆಯುತ್ತಿಲ್ಲ ಎಂದು ಟೀಕಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜನರ ದುಡಿಮೆಯ ಅವಕಾಶಗಳೆಲ್ಲ ಮುಚ್ಚಿ ಹೋಗಿವೆ. ಅಸಂಖ್ಯಾತ ಕಾರ್ಮಿಕರು, ನೌಕರರು ಕಾರ್ಖಾನೆ ಮತ್ತು ಕಂಪೆನಿಗಳು ಕೆಲಸದಿಂದ ತೆಗೆದು ಹಾಕಿವೆ. ಜನರ ಬಳಿ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಕೊರೋನ ಸೋಂಕಿತರ ಚಿಕಿತ್ಸೆಗೆ ದರ ನಿಗದಿ ಮಾಡಿರುವುದನ್ನು ನೋಡಿದರೆ ಮೇಲ್ಮಧ್ಯಮ ವರ್ಗಗಳಿಗೆ ಆಘಾತ ತರುವಂತಿದೆ ಎಂದು ಸಿದ್ಧರಾಮಯ್ಯ ಹೇಳಿದರು.
ಕೊರೋನ ಸೋಂಕು ಕುಟುಂಬದೊಳಗೆ ವ್ಯಾಪಿಸಿದರೆ ಸಾಮಾನ್ಯ ಕುಟುಂಬದ ಸದಸ್ಯರೆಲ್ಲರನ್ನು ಬಾಧಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ದರ ನಿಗದಿ ಮಾಡಿದ್ದು, ಜನ ಎಲ್ಲಿಂದ ನೀಡಲು ಸಾಧ್ಯ? ಸರಕಾರ ನಿಗದಿಪಡಿಸಿರುವ ದರವನ್ನು ನೋಡಿದರೆ ಜನರಿಗೆ ಹೃದಯಾಘಾತವಾಗುವಂತಿದೆ. ಇದನ್ನು ಗಮನಿಸಿದರೆ ಸರಕಾರಕ್ಕೆ ಕಣ್ಣು, ಕಿವಿ, ಹೃದಯ ಜೀವಂತವಾಗಿಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಜನರ ಬಗ್ಗೆ ಕಾಳಜಿ ಇರುವ ಸರಕಾರ ಮಾಡುವ ಕೆಲಸವೇ ಇದು? ಒಂದು ಕುಟುಂಬದ ನಾಲ್ಕೈದು ಮಂದಿ ಸದಸ್ಯರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುವ ಅನಿವಾರ್ಯ ಉಂಟಾದರೆ ಎಲ್ಲಿಂದ 10ರಿಂದ 12 ಲಕ್ಷ ರೂ.ತರಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಜನತೆಗೆ ಒಂದು ಕಡೆ ಹಣ ಹೊಂದಿರುವ ಸಮಸ್ಯೆಯಾದರೆ, ಮತ್ತೊಂದು ಕಡೆ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ನೀಡಲು ಜಾಗವೇ ಇಲ್ಲದೆ ತುಂಬಿ ಹೋಗಿವೆ ಎಂಬ ಮಾಹಿತಿ ಬರುತ್ತಿದೆ ಎಂದರು.
ಕೇಂದ್ರ ಸರಕಾರಕ್ಕೆ ಸುಮಾರು 35 ಸಾವಿರ ವೆಂಟಿಲೇಟರ್ ಗಳನ್ನು ಕೇಳಿದರೆ, ಕೇಂದ್ರ ಸರಕಾರ ಕೇವಲ 90 ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಿರುವ ಮಾಹಿತಿ ಇದೆ. ಸೂಕ್ತ ವೈದ್ಯಕೀಯ ಸಲಕರಣೆಗಳಿಲ್ಲ ಎಂದ ಅವರು, ಕೊರೋನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಭರಿಸಬೇಕು ಎಂದು ಆಗ್ರಹಿಸಿದರು.
ಸರಕಾರ ದರ ನಿಗದಿಯಿಂದ ಹಣ ಇದ್ದವರಿಗೆ ಮಾತ್ರ ವೆಂಟಿಲೇಟರ್ ಸೌಲಭ್ಯ ಪಡೆಯುತ್ತಾರೆ. ಸೋಂಕು ತಗುಲಿ ಬದುಕುವ ಶಕ್ತಿ ಇದ್ದು ಹಣವಿಲ್ಲದ ಬಡ-ಮಧ್ಯಮ ವರ್ಗದವರು ವೆಂಟಿಲೇಟರ್ ಸೌಲಭ್ಯ ಪಡೆಯಲಾಗದೆ ಮರಣ ಹೊಂದಿದರೆ ಸರಕಾರ ಕೊಲೆಗಡುಕನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಹೀಗಾಗಿ ಸರಕಾರ ಉಚಿತವಾಗಿ ಚಿಕಿತ್ಸೆ ನೀಡುವ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಚಿಕಿತ್ಸೆಯ ಶಿಷ್ಟಾಚಾರ ಸರಿಯಾಗಿ ಪಾಲನೆಯಾಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಲು ಸರಕಾರ ತಜ್ಞರ ಸಮಿತಿ ನೇಮಿಸಬೇಕು. ಜನಸಾಮಾನ್ಯರು ಆತಂಕವಿಲ್ಲದೆ ಚಿಕಿತ್ಸೆ ಪಡೆಯುವಂತಹ ನಿರ್ಭೀತ ವಾತಾವರಣ ಸೃಷ್ಟಿಸಬೇಕು'
-ಸಿದ್ದರಾಮಯ್ಯ, ವಿಪಕ್ಷ ನಾಯಕ