ಕೊರೋನ ಭೀತಿ: ಕರ್ತವ್ಯಕ್ಕೆ ಹಾಜರಾಗಲು ಐಟಿ-ಬಿಟಿ ಸಿಬ್ಬಂದಿ ಹಿಂದೇಟು
ಬೆಂಗಳೂರು, ಜೂ.25: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿರುವುದರಿಂದ ಎಲ್ಲರೂ ಭಯಭೀತರಾಗಿದ್ದಾರೆ. ಇದರ ನಡುವೆ ಐಟಿ ಕಂಪೆನಿಗಳು ಸಿಬ್ಬಂದಿಯನ್ನು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದರೂ, ಬಹುತೇಕ ಐಟಿ-ಬಿಟಿ ಸಿಬ್ಬಂದಿ ಸೋಂಕಿನ ಆತಂಕದಿಂದ ಕಚೇರಿಗೆ ಹೋಗಲು ನಿರಾಕರಿಸುತ್ತಿದ್ದಾರೆ.
ರಾಜ್ಯಾದ್ಯಂತ ಲಾಕ್ಡೌನ್ ತೆಗೆದು 25 ದಿನಗಳು ಕಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ಕಂಪೆನಿಗಳು ವಾಪಸ್ ಕಚೇರಿಗೆ ಬರುವಂತೆ ಸೂಚನೆ ನೀಡಲಾಗಿದ್ದರೂ ಬಹುತೇಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರಿದಯಾಗಿದೆ.
ಅನ್ಕಾಲ್ ಬಳಿಕ ಸರಕಾರಿ ಕಚೇರಿಗಳು ಸೇರಿದಂತೆ ಬಹುತೇಕ ಖಾಸಗಿ ಕಂಪೆನಿಗಳಲ್ಲಿ ನೌಕರರು ಹಾಜರಾಗುತ್ತಿದ್ದಾರೆ. ಅದೇರೀತಿ ಬೀದಿ ಬದಿಯ ಕೈಗಾಡಿಗಳು ಸೇರಿದಂತೆ ದೊಡ್ಡ ವ್ಯಾಪಾರಿಗಳವರೆಗೂ ಎಲ್ಲ ವಹಿವಾಟುಗಳು ಸರಾಗವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ವಿಪ್ರೋ, ಇನ್ಪೋಸಿಸ್, ಟಾಟಾ ಬಯೋಕಾನ್, ಟಿಸಿಎಲ್ ಸೇರಿದಂತೆ ವಿವಿಧ ಕಂಪೆನಿಗಳು ಮತ್ತೆ ಕಾರ್ಯಾಚರಣೆ ಆರಂಭಿಸಿವೆ. ಆದರೆ, ಇದರ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರಿದಯಾಗಿದೆ.
ಸಾರಿಗೆ ಸಮಸ್ಯೆ: ಕೆಲ ಕಂಪೆನಿಗಳು ಸಾರಿಗೆ ವ್ಯವಸ್ಥೆಯನ್ನು ಮಾಡಿದ್ದು, ಒಂದು ಕ್ಯಾಬಿನ್ನಲ್ಲಿ ಮೂರರಿಂದ ನಾಲ್ಕು ಮಂದಿಗೆ ಅಥವಾ ಬಿಎಂಟಿಸಿ ಬಸ್ಗಳಲ್ಲಿ ಬರಲು ಹೇಳುತ್ತಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕ ವಾಹನಗಳನ್ನು ಬಳಸುವುದು ಸುರಕ್ಷಿತವಲ್ಲ. ಇನ್ನು, ಸ್ವಂತ ವಾಹನಗಳಲ್ಲಿ ಹೋಗಲು ಸಿಬ್ಬಂದಿ ಮುಂದಾದರೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಯಾರೂ ಸ್ವಂತ ವಾಹನ ಬಳಸಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ.