ಜನತೆಯ ಸಂಕಷ್ಟಕ್ಕೆ ಸ್ಪಂದಿಸದ ಬಿಬಿಎಂಪಿ ಸಹಾಯವಾಣಿ: ಆರೋಪ
ಬೆಂಗಳೂರು, ಜು.18: ನಗರದಲ್ಲಿ ಕೊರೋನ ಸೋಂಕಿತರ ಸಹಾಯಕ್ಕಾಗಿ ಬಿಬಿಎಂಪಿ ತೆರೆದಿರುವ ಸಹಾಯವಾಣಿಯಿಂದ ಸೋಂಕಿತರು ಹಾಗೂ ಶಂಕಿತರಿಗೆ ಯಾವುದೇ ಸಹಾಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಮಹಾನಗರದಲ್ಲಿ ಚಿಕಿತ್ಸೆಗಾಗಿ ಪರದಾಟ ನಡೆಸಬೇಕಾಗಿದೆ.
ಶನಿವಾರದಂದು ವಿವಿಪುರದ ಸೋಂಕಿತ ವ್ಯಕ್ತಿ ಇರುವ ಒಂದು ಮನೆಯಲ್ಲಿ ಮೂರು ಜನ ಇದ್ದು, ಎಲ್ಲರಿಗೂ ಸೋಂಕು ತಗಲಿದೆ. ಮಂಗಳವಾರದಿಂದ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದರೂ ಯಾರು ಸ್ಪಂದಿಸುತ್ತಿಲ್ಲ. ಇದರಿಂದ ಮಹಿಳೆ ಅಸುನೀಗಿದ್ದಾರೆ.
'ಮನೆಯ ಉಳಿದವರಿಗೆ ಸೋಂಕು ಇದ್ದು, ದಯವಿಟ್ಟು ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆಗೆ ಸರಿಯಾಗಿ ಸ್ಪಂದಿಸದೆ, ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ವೆಂಟಿಲೇಶನ್ ಇಲ್ಲ ಎಂದು ಸಬೂನು ಹೇಳಿ ಹೇಳಿ, ನಾಲ್ಕು ದಿನ ಸತಾಯಿಸಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಶುಕ್ರವಾರ ತೀವ್ರ ಉಸಿರಾಟದ ತೊಂದರೆಯಾಗಿ ತಾಯಿ ಪ್ರಾಣಬಿಟ್ಟಿದ್ದಾರೆ.
ಇತರರಿಗೂ ಕೊರೋನ ಪಾಸಿಟಿವ್ ಇದ್ದ ಕಾರಣ ಕೊನೆಗೆ ಬಿಬಿಎಂಪಿ ಅಧಿಕಾರಿಗಳೇ ಮೃತ ದೇಹವನ್ನು ಅನಾಥರಂತೆ ಸಂಸ್ಕಾರ ಮಾಡಿದ್ದಾರೆ. ಬಿಬಿಎಂಪಿ ಹಾಗೂ ಸರಕಾರ ಎಚ್ಚೆತ್ತುಕೊಂಡರೆ ನಮ್ಮ ತಾಯಿ ಬದುಕುತ್ತಿದ್ದರೆಂದು ಸೋಂಕಿತ ಮಗ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕರೆ ಸ್ವೀಕರಿಸದ ಅಧಿಕಾರಿಗಳು: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ನಡುವೆ ಆಸ್ಪತ್ರೆ ಬೆಡ್ ಮತ್ತು ಆಂಬುಲನ್ಸ್ ಗಳ ಕೊರತೆ ಎದುರಾಗಿದೆ. ಇದರಿಂದ ಹಲವಾರು ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂಥ ದುಃಸ್ಥಿತಿ ಎದುರಾಗಿದೆ.
ಬಾಣಸವಾಡಿಯ ನಿವಾಸಿಯಾದ 45 ವರ್ಷದ ಮಹಿಳೆಗೆ ಶುಕ್ರವಾರ ಸೋಂಕು ದೃಢಪಟ್ಟಿದ್ದು, ಪಾಲಿಕೆ ಅಧಿಕಾರಿಗಳು ಶನಿವಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಸಂಜೆಯಾದರೂ ಆಂಬುಲನ್ಸ್ ಬಂದಿಲ್ಲ. ಅದಕ್ಕಾಗಿ ಕರೆ ಮಾಡಿದರೆ, ಕರೆ ಸ್ವೀಕರಿಸುತ್ತಿಲ್ಲ. ಈ ನಡುವೆ ಸೋಂಕಿತೆಯ ಉಸಿರಾಟದ ಸಮಸ್ಯೆ ಕ್ಷಣ ಕ್ಷಣಕ್ಕೂ ಉಲ್ಬಣ ಆಗುತ್ತಿದೆ ಎಂದು ಮಹಿಳೆಯ ಸಹೋದರ ಆರೋಪಿಸಿದ್ದಾರೆ.
ವಿದ್ಯುತ್ ಚಿತಾಗಾರ ಫುಲ್ ರಶ್
ನಗರದಲ್ಲಿ ಪ್ರತಿದಿನ 70ಕ್ಕೂ ಅಧಿಕ ಸೋಂಕಿತರು ಮೃತಪಡುತ್ತಿದ್ದು, ಅಂತ್ಯಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರಗಳ ಸಮಸ್ಯೆ ಎದುರಾಗಿದೆ. ಸೋಂಕಿತರ ಮೃತದೇಹ ಹಾಗೂ ಬೇರೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಸೋಂಕಿತನ ಮೃತದೇಹವನ್ನು ಸುಡಲು ಒಂದು ಗಂಟೆ ಸಮಯ ಬೇಕಾಗಿದ್ದು, ಇದರಿಂದ ವಿಲ್ಸನ್ ಗಾರ್ಡನ್, ಬನಶಂಕರಿ ಚಿತಾಗಾರ, ಸುಮ್ಮನಹಳ್ಳಿ, ಹೆಬ್ಬಾಳ ಚಿತಾಗಾರಗಳ ಮುಂದೆ ಕೋವಿಡ್ ಮೃತದೇಹ ಹೊತ್ತ ಆಂಬುಲನ್ಸ್ ಗಳ ಸಾಲು ದಿನೇ ದಿನೇ ಹೆಚ್ಚುತ್ತಲೆ ಇದೆ. ಜತೆಗೆ ಕೊರೋನ ಸೋಂಕಿಲ್ಲದೆ ಮೃತಪಟ್ಟ ಮೃತ ದೇಹಗಳನ್ನ ತಂದ ಕುಟುಂಬಸ್ಥರು ಗಂಟೆಗಟ್ಟಲೆ ಆತಂಕದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಕರೆ ಮಾಡಿದರೆ ಕ್ಯಾರೇ ಎನ್ನದ ಅಧಿಕಾರಿಗಳು
ಕತ್ರಿಗುಪ್ಪೆಯ ಭುವನೇಶ್ವರಿ ನಗರದಲ್ಲಿರುವ ಕೊರೋನ ಸೋಂಕಿತ ವೃದ್ಧ ಮೃತಪಟ್ಟಿದ್ದು, ಅವರ ಮನೆಯಲ್ಲಿ 7 ಜನರಿಗೆ ಜ್ವರ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಸೋಂಕಿತರ ಮನೆ ಇನ್ನೂ ಸ್ಯಾನಿಟೈಸ್ ಆಗಿಲ್ಲ, ಸೀಲ್ ಡೌನ್ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆಸ್ಪತ್ರೆ ಸ್ವಚ್ಛವಿಲ್ಲ
ವಿಕ್ಟೋರಿಯಾ ಆಸ್ಪತ್ರೆಗೆ ಬಂದರೆ ಕೊರೋನ ಗುಣವಾಗುವುದಿಲ್ಲ. ಮತ್ತಷ್ಟು ಹೆಚ್ಚಾಗುತ್ತದೆ ಎಂದು ದಾಖಲಾಗಿರುವ ಸೋಂಕಿತೆಯೊಬ್ಬರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ನಾವು ಇಲ್ಲಿಗೆ ಬಂದು ಒಂದು ವಾರ ಆಗಿದೆ. ಈವರೆಗೂ ನಾವೇ ಸ್ವಚ್ಛಗೊಳಿಸಿದ್ದೇವೆ. ಸೊಳ್ಳೆಗಳು ಹೆಚ್ಚಾಗಿವೆ. ಹೀಗಾದರೆ, ನಾವು ಗುಣವಾಗುವುದಾದರೂ ಹೇಗೆ ಎಂದು ಸೋಂಕಿತೆ ತಮ್ಮ ನೋವು ತೋಡಿಕೊಂಡಿದ್ದಾರೆ.