ಬಿಡಿಎ ನಿವೇಶನ ಹರಾಜಿಗೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು, ಆ.20: ಬಿಡಿಎಗೆ ಸೇರಿದ ವಾಣಿಜ್ಯ ಉದ್ದೇಶದ ನಿವೇಶನ ಮತ್ತು ಮೂಲೆ ನಿವೇಶನ ಹೊರತುಪಡಿಸಿ ಮಧ್ಯದ ನಿವೇಶನಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಧ್ಯದ ನಿವೇಶನಗಳನ್ನು ಹರಾಜು ಮಾಡದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ. ಈ ಆದೇಶವು ವಾಣಿಜ್ಯ ಮತ್ತು ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ನಿರ್ಬಂಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮತ್ಯಾಲನಗರದ ನಿವಾಸಿ ಕೆರೋಜಿ ರಾವ್(ಮಾಜಿ ಸೈನಿಕ) ಅವರಿಗೆ 2006ರ ಜೂನ್ನಲ್ಲಿ ಅರವತ್ತಿ ಲೇಔಟ್ನಲ್ಲಿ ಬಿಡಿಎ ನಿವೇಶನ ನಿಗದಿಯಾಗಿತ್ತು. 2007ರ ಜು.4ರಂದು ಮಾರಾಟ ಒಪ್ಪಂದವನ್ನೂ ಬಿಡಿಎ ಮಾಡಿಕೊಂಡಿತ್ತು. ಅದೇ ದಿನ ಸ್ವಾಧೀನ ಪ್ರಮಾಣ ಪತ್ರವನ್ನೂ ನೀಡಿತ್ತು. ಇದಾದ 10 ವರ್ಷಗಳ ನಂತರ 2016ರಲ್ಲಿ ನಿವೇಶನ ಮಂಜೂರಾತಿ ರದ್ದುಪಡಿಸಲಾಗಿದೆ ಎಂದು ಬಿಡಿಎ ಮಾಹಿತಿ ನೀಡಿದೆ.
ಈ ನಡುವೆ, 2020ರ ಜೂ.17ರಂದು ಬಿಡಿಎ ಅಧಿಸೂಚನೆ ಹೊರಡಿಸಿ ವಾಣಿಜ್ಯ, ವಸತಿ ಮತ್ತು ಮಧ್ಯದ ನಿವೇಶನಗಳನ್ನು ಹರಾಜು ಮಾಡಲು ಮುಂದಾಗಿತ್ತು. ಕೆರೋಜಿ ರಾವ್ ಅವರು ಮತ್ತೊಂದು ಅರ್ಜಿಯನ್ನು ಹೈಕೋರ್ಟ್ಗೆ ಸಲ್ಲಿಸಿದ್ದು, ನನ್ನಂತೆಯೇ ಅತಂತ್ರ ಸ್ಥಿತಿಯಲ್ಲಿರುವ ನಾಗರಿಕರನ್ನು ನಿರ್ಲಕ್ಷಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಆರೋಪಿಸಿದ್ದಾರೆ.
ವಕೀಲರ ವಾದ ಆಲಿಸಿರುವ ನ್ಯಾಯಪೀಠವು, ಮಧ್ಯದ ನಿವೇಶನಗಳನ್ನು ಹರಾಜು ಮಾಡದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ.