ಗಾಂಧಿ, ಅಂಬೇಡ್ಕರ್, ಲೋಹಿಯಾ ಚಿಂತನೆಗಳನ್ನು ಒಟ್ಟಾಗಿ ಗ್ರಹಿಸುವುದು ಇಂದಿನ ಅಗತ್ಯ: ರಾಜಪ್ಪ ದಳವಾಯಿ
ಬೆಂಗಳೂರು, ಅ.3: ಗಾಂಧಿವಾದ, ಅಂಬೇಡ್ಕರ್ ವಾದ ಹಾಗೂ ಲೋಹಿಯಾವಾದ ಒಟ್ಟಾಗಿ ಸಾಗಿದಾಗ ಮಾತ್ರ ಭಾರತದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬೆಳವಣಿಗೆ ಸಾಧ್ಯವೆಂದು ಹಿರಿಯ ನಾಟಕಕಾರ ಪ್ರೊ.ರಾಜಪ್ಪ ದಳವಾಯಿ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಬೆಂಗಳೂರು ವಿವಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಚಿಂತನೆಗಳು ಒಂದು ಮತ್ತೊಂದರ ಪ್ರತಿಸ್ಪರ್ಧಿಯಲ್ಲ. ಈ ಮೂರು ಚಿಂತನೆಯನ್ನು ಒಟ್ಟಾಗಿ ಗ್ರಹಿಸಿದಾಗ ಮಾತ್ರ ದೇಶದ ಬೆಳವಣಿಗೆ ಸಾಧ್ಯವೆಂದು ತಿಳಿಸಿದರು.
ದೇಶದ ಜನತೆ ಗಾಂಧಿವಾದದ ನೈತಿಕತೆ, ಲೋಹಿಯಾವಾದದ ಜಾತ್ಯತೀತತೆ ಹಾಗೂ ಅಂಬೇಡ್ಕರ್ವಾದದ ಸಾಮಾಜಿಕತೆ ಈ ಮೂರನ್ನು ಒಟ್ಟಾಗಿ ಗ್ರಹಿಸಿಸಬೇಕು. ಅದರಿಂದ ಮೂಡುವ ಹೊಸ ಶಕ್ತಿ, ಚಿಂತನೆಯಿಂದ ಭಾರತವನ್ನು ಮತ್ತಷ್ಟು ಸಶಕ್ತವಾಗಿ ಮುನ್ನಡೆಸಬಹುದೆಂದು ಅವರು ಹೇಳಿದ್ದಾರೆ.
ಇವತ್ತಿನ ಆಧುನಿಕ ಯುಗದಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಚಿಂತನೆಗಳನ್ನು ಸಮನ್ವಯ ಮಾಡಿಕೊಳ್ಳಲು ನಮ್ಮೆದುರಿಗೆ ಅನೇಕ ಸವಾಲುಗಳಿವೆ. ಹೀಗಾಗಿ ನಮಗೆ ವಿವೇಕ ಎಂಬುದು ಹಿಂದಿಗಿಂತ ಇಂದು ಹೆಚ್ಚು ಅನಿವಾರ್ಯವಾಗಿದೆ. ಪರಸ್ಪರ ವೈರುಧ್ಯಗಳ ನಡುವೆಯೂ ಇರಬಹುದಾದ ಅಂತರ್ ಸಂಬಂಧಗಳನ್ನು ಬೆಸೆದುಕೊಂಡರೆ ಆಧುನಿಕ ಭಾರತವನ್ನು ಯಶಸ್ವಿಯಾಗಿ ಕಟ್ಟಬಹುದೆಂದು ಅವರು ಹೇಳಿದ್ದಾರೆ.
ಆಧುನಿಕ ಜಗತ್ತಿಗೆ ಗಾಂಧಿ ಎಂಬುದು ಒಂದು ಮೌಲ್ಯವಾಗಿದೆ. ಗಾಂಧಿ ಇಲ್ಲದ ಭಾರತವಾಗಲಿ, ಜಗತ್ತಾಗಲಿ ಇರಲು ಸಾಧ್ಯವಿಲ್ಲವೆಂಬಂತೆ ಸತ್ಯಾಗ್ರಹ, ಅಹಿಂಸೆ ಹಾಗೂ ಅನ್ಯಾಯದ ವಿರುದ್ಧದ ಹೋರಾಟಗಳು ಆವರಿಸಿಕೊಂಡಿವೆ. ಗಾಂಧಿ ತತ್ವಗಳು ಎಲ್ಲ ಕಾಲಕ್ಕೂ ಜೀವಂತವಾಗಿರುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗಾಂಧಿ ಅಧ್ಯಯನ ಸಂಸ್ಥೆಯ ನಿರ್ದೇಶಕ ನಟರಾಜ್ ಹುಳಿಯಾರ್, ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್ ಉಪಸ್ಥಿತರಿದ್ದರು.