ಬೆಂಗಳೂರು: ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಇಬ್ಬರು ಇಂಜಿನಿಯರ್ ಗಳು ಮೃತ್ಯು
ಬೆಂಗಳೂರು, ಅ.12: ಯಲಹಂಕ ಸಮೀಪದ ಅನಿಲ ಆಧಾರಿತ ವಿದ್ಯುತ್ ಸ್ಥಾವರ (ವೈಸಿಸಿಪಿಪಿ)ದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಂಜಿನಿಯರ್ ಗಳಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ವೈಸಿಸಿಪಿಪಿ ಕಾರ್ಯಪಾಲಕ ಇಂಜಿನಿಯರ್ (ಮೆಕ್ಯಾನಿಕಲ್) ಕೃಷ್ಣಭಟ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಲೆಕ್ಟ್ರಿಕಲ್) ಮಂಜಪ್ಪ ಮೃತಪಟ್ಟವರು.
ಕಳೆದ ಅ.2ರ ಮುಂಜಾನೆ 3.30ರ ವೇಳೆ 370 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ 1 ಘಟಕವನ್ನು ಕಾರ್ಯಾಚರಣೆಗೆ ಅಣಿಗೊಳಿಸುವ ವೇಳೆ, ಟರ್ಬೈನ್ ಬಳಿ ಸಂಭವಿಸಿದ ಸ್ಫೋಟದಲ್ಲಿ ಬೆಂಕಿ ಜ್ವಾಲೆ ಹಠಾತ್ ವ್ಯಾಪಿಸಿ ಕೆಲಸದ ಸ್ಥಳದಲ್ಲಿ ದ್ದ 15 ಇಂಜಿನಿಯರ್ ಗಳು ಗಾಯಗೊಂಡಿದ್ದರು. ಅವರ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಇಂಜಿನಿಯರ್ ಗಳು ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.
ಗಾಯಗೊಂಡಿದ್ದ ಮರಿಸ್ವಾಮಿ, ಅಶ್ವತ್ಥ ನಾರಾಯಣ, ಕೆ.ಪಿ.ರವಿ, ಡಿ.ಪಿ.ಶ್ರೀನಿವಾಸ ಮೂರ್ತಿ, ಬಿ.ಶ್ರೀನಿವಾಸ, ಅಕ್ವಲ್ ರಘುರಾಮ್, ಅಶೋಕ್ ಸೇರಿದಂತೆ ಪ್ರಮುಖರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.