ರಾಜಧಾನಿಯಲ್ಲಿ ಮಂಜಿನ ವಾತಾವರಣ: ಇನ್ನೆರಡು ದಿನ ಭಾರೀ ಮಳೆಯ ಮುನ್ಸೂಚನೆ
ಬೆಂಗಳೂರು, ಅ.22: ರಾಜಧಾನಿಯಲ್ಲಿ 30 ವರ್ಷಗಳ ಬಳಿಕ ಮೊದಲ ಬಾರಿಗೆ ಮಂಜು ಕವಿದ ವಾತಾವರಣ ಕಂಡು ಬಂದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು ಕೆಳಮಟ್ಟದಲ್ಲಿ ಮೋಡಗಳ ಚಲನೆ ಇರುವುದರಿಂದ ನಗರದಲ್ಲಿ ಮಂಜು ಕವಿದ ವಾತಾವರಣ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮುಂದಿನ ಎರಡು ದಿನ ಕೂಡ ಮೋಡ ಕವಿದ ವಾತಾವರಣ ನಗರದಲ್ಲಿ ಇರಲಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರದಂದು ನಗರದ ಫ್ರೀಡಂ ಪಾರ್ಕ್, ಕೆ.ಆರ್.ವೃತ್ತ, ಕಾರ್ಪೋರೇಷನ್ ವೃತ್ತ, ಮೈಸೂರು ರಸ್ತೆ, ಜಯನಗರ, ಲಾಲ್ಭಾಗ್ ರಸ್ತೆಯಲ್ಲಿ ಉತ್ತಮ ಮಳೆಯಾಗಿದ್ದು, ವಿಜಯನಗರ, ಹಂಪಿನಗರ, ಅತ್ತಿಗುಪ್ಪೆ, ಆರ್.ಆರ್.ನಗರ, ನೆಲಗುಳಿ, ಕಾಡುಗೋಡಿ, ಹಗದೂರು, ದೇವನಹಳ್ಳಿಯ ಕೊಯಿರಾ ಭಾಗದಲ್ಲಿ ತುಂತುರು ಮಳೆ ಬಿದ್ದಿದೆ.
ರಾಜಧಾನಿಯಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿರುವ ವರುಣ ಶುಕ್ರವಾರವೂ ಸುರಿಯುವ ಸಾಧ್ಯತೆಗಳಿದ್ದು, ಈ ನಡುವೆ ಬೆಂಗಳೂರು ನಗರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.