ಆರ್ಆರ್ ನಗರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ-ನಟಿಯರ ರೋಡ್ ಶೋ
ನಾನು ಯಾವುದೇ ಪಕ್ಷದ ಪರ ಪ್ರಚಾರ ನಡೆಸುವುದಿಲ್ಲ: ದರ್ಶನ್ ಸ್ಪಷ್ಟನೆ
ಬೆಂಗಳೂರು, ಅ. 30: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಯಶವಂತಪುರ, ಮತ್ತಿಕೆರೆ, ಮುತ್ಯಾಲನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಶುಕ್ರವಾರ ಚಿತ್ರನಟ ದರ್ಶನ್, ನಟಿ ಅಮೂಲ್ಯ ಸೇರಿದಂತೆ ಇನ್ನಿತರ ಕಲಾವಿದರು ಅಬ್ಬರದ ಪ್ರಚಾರ ನಡೆಸಿದರು.
ಈ ವೇಳೆ ನಟ ದರ್ಶನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನರು ಹಾಗೂ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಯಾವುದೇ ಪಕ್ಷದ ಪ್ರಚಾರ ನಡೆಸುವುದಿಲ್ಲ: `ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಬದಲಿಗೆ ಮುನಿರತ್ನ ಅವರು ನನ್ನ ಆತ್ಮೀಯರು. ಹೀಗಾಗಿ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದೇನೆ. ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅವರ ಪರ ಪ್ರಚಾರ ಮಾಡಿದ್ದೇನೆ' ಎಂದು ದರ್ಶನ್ ಸ್ಪಷ್ಟನೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಕೊರೋನ ಸೋಂಕು ಆವರಿಸಿದ್ದ ಸಮಯದಲ್ಲಿ ಮುನಿರತ್ನ ಕ್ಷೇತ್ರದ ಜನರ ಪರವಾಗಿ ಹೇಗೆ ಕೆಲಸ ಮಾಡಿದ್ದಾರೆಂಬುದನ್ನು ನಾನು ನೋಡಿದ್ದೇನೆ. ಅವರು ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ' ಎಂದು ಇದೇ ವೇಳೆ ತಿಳಿಸಿದರು.
ಕೊರೋನ ಲಾಕ್ಡೌನ್ ಸಮಯದಲ್ಲಿ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಅವರು ಮುಂದು. ಹೀಗಾಗಿ ಅವರ ಪರವಾಗಿ ನಾನು ಮತಯಾಚನೆ ಮಾಡುತ್ತಿದ್ದೇನೆ ಹೊರತು ನಾನು ಯಾವುದೇ ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ದರ್ಶನ್ ಪುನರುಚ್ಚರಿಸಿದರು.