ಅತ್ಯಾಧುನಿಕ ತಂತ್ರಜ್ಞಾನದಿಂದ ಹಿಮ್ಮುಖಗೊಳ್ಳುತ್ತಿರುವ ಭಾರತ : ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಕಳವಳ
ಯುವಜನ ಸಮಾವೇಶ
ಮಂಗಳೂರು, ನ.2.ವಿಜ್ಞಾನ-ತಂತ್ರಜ್ಞಾನಗಳು ತಿಂಗಳಿಗೊಮ್ಮೆ ದುಪ್ಪಟ್ಟಾಗುತ್ತಿರುವಾಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಪಠ್ಯಕ್ರಮವನ್ನು ಹಿಮ್ಮುಖವಾಗಿಸುವ ಯೋಜನೆಯನ್ನು ಹೊಂದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಪ್ರಗತಿಪರ ಚಿಂತಕ ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ ಕಳವಳ ವ್ಯಕ್ತಪಡಿಸಿದರು.
ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್) ಮತ್ತು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್ಎಫ್ಐಡಬ್ಲ್ಯು) ಮಂಗಳೂರು ತಾಲೂಕು ಸಮಿತಿಗಳ ನೇತೃತ್ವದಲ್ಲಿ ನಗರದ ಕಾ.ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ರವಿವಾರ ನಡೆದ ವಿದ್ಯಾರ್ಥಿ-ಯುವಜನ-ಮಹಿಳೆಯರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಅತ್ಯಾಧುನಿಕ ಸಂಶೋಧನೆಗಳನ್ನು ನಡೆಸಲಾಗದೆ ಹೊಸ ತಂತ್ರಜ್ಞಾನ ನಿರ್ಮಾಣದಲ್ಲಿ ಭಾಗವಹಿಸಲಾಗದೆ ಕಂಪೆನಿಗಳ ಕೂಲಿಯಾಳು ಗಳಾಗಿ ದುಡಿಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಕೊರೋನ ನಿಯಂತ್ರಣದ ನೆಪದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾ ಗಿದ್ದು ಮಕ್ಕಳಿಗೆ ಸೂಕ್ತ ಜ್ಞಾನವನ್ನು ನಿರಾಕರಿಸಲಾಗುತ್ತಿದೆ. ಈ ಕಾರಣಗಳಿಂದಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಭಾರತ ಹಿಮ್ಮುಖ ವಾಗುತ್ತಿದೆ. ಪರಿಣಿತ ವಿದ್ವಾಂಸರು ತಮ್ಮ ವಿಚಾರಗಳನ್ನು ಮಂಡಿಸಬಾರದೆಂದು ವಿವಿಗಳೇ ತಡೆಯೊಡ್ಡುತ್ತಿರುವ ವಿಷಮ ಪರಿಸ್ಥಿತಿ ಇದೆ. ಆಡಳಿತ ವರ್ಗದ ಈ ಅಸಂಬದ್ದ ನೀತಿಗಳಿಂದಾಗಿ ದೇಶದ ವಿದ್ಯಾರ್ಥಿ-ಯುವಜನ-ಮಹಿಳೆಯರು ಅಪಾರ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಶ್ರೀನಿವಾಸ ಕಕ್ಕಿಲ್ಲಾಯ ನುಡಿದರು.
ಎಐವೈಎಫ್ ಕರ್ನಾಟಕ ರಾಜ್ಯ ಮಾಜಿ ಅಧ್ಯಕ್ಷ ವಿ.ಎಸ್. ಬೇರಿಂಜ ಅಧ್ಯಕ್ಷತೆ ವಹಿಸಿದ್ದರು. ಡಾಕ್ಟರೇಟ್ ಪದವಿ ಪಡೆದ ಸವಿತಾ ಸುವರ್ಣ, ಕೊರೋನ ಯೋಧರುಗಳಾದ ವಾರಿಜಾ ಬಜ್ಪೆ, ರೂಪವತಿ ಸಿದ್ದಾರ್ಥನಗರ ಅವರನ್ನು ಸನ್ಮಾನಿಸಲಾಯಿತು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ರಾವ್, ಎನ್ಎಫ್ಐಡಬ್ಲ್ಯು ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಐ ಬಂಟ್ವಾಳ ಕಾರ್ಯದರ್ಶಿ ಬಿ. ಶೇಖರ್ ಮಾತನಾಡಿದರು. ಎಂ. ಕರುಣಾಕರ್ ಸ್ವಾಗತಿಸಿದರು. ಜಗತ್ಪಾಲ್ ಕೋಡಿಕಲ್ ವಂದಿಸಿದರು.