ಉಡುಪಿ ವಿಮಾ ಪಿಂಚಣಿದಾರರ ಸಂಘದಿಂದ ಧರಣಿ
ಉಡುಪಿ, ನ.3: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘಟನೆಯ ಕರೆಯಂತೆ ವಿಮಾ ಪಿಂಚಣಿ ದಾರರ ಸಂಘ ಉಡುಪಿ ವಿಭಾಗದ ಸದಸ್ಯರು ಅಜ್ಜರಕಾಡಿನಲ್ಲಿರುವ ಜೀವ ವಿಮಾ ನಿಗಮ ವಿಭಾಗೀಯ ಕಛೇರಿಯ ಎದುರು ಇಂದು ಧರಣಿ ನಡೆಸಿದರು.
ವಿಮಾ ನೌಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಶ್ರೀಪತಿ ಆಚಾರ್ಯ ಮಾತನಾಡಿ, ಜನಸಾಮಾನ್ಯರ ಉಳಿತಾಯದ ಹಣದಿಂದ ಬೃಹದಾಕಾರವಾಗಿ ಬೆಳೆದು ನಿಂತಿರುವ ಎಲ್ಐಸಿ ಷೇರುಗಳನ್ನು ಹಂತಹಂತವಾಗಿ ಖಾಸಗಿಯವರಿಗೆ ಮಾರಿ ತನ್ನ ಕೊರತೆ ಬಜೆಟನ್ನು ಸರಿದೂಗಿಸುವ ಕೇಂದ್ರ ಸರಕಾರದ ಧೋರಣೆ ಖಂಡನೀಯ ಎಂದರು.
ಹಿರಿಯ ಸದಸ್ಯ ಮತ್ತು ವಿಮಾ ನೌಕರ ಸಂಘ ಉಡುಪಿ ವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ವಿಶ್ವನಾಥ ರೈ ಮಾತನಾಡಿ, ಅಖಿಲ ಭಾರತ ಮಟ್ಟದಲ್ಲಿ ನ.26ರಂದು ನಡೆಯಲಿರುವ ಮಹಾ ಮುಷ್ಕರದಲ್ಲಿ ಸದಸ್ಯರೆಲ್ಲರೂ ಪಾಲುಗೊಳ್ಳುವಂತೆ ಆಗ್ರಹಿಸಿದರು.
ಕುಟುಂಬ ಪಿಂಚಣಿದಾರರ ಪಿಂಚಣಿಯನ್ನು ಈಗಿರುವ ಮೂಲ ವೇತನದ ಶೇ.15ರಿಂದ 30ಕ್ಕೆ ಹೆಚ್ಚಿಸುವ ಎಲ್ಲೈಸಿ ಆಡಳಿತ ವರ್ಗದ ಶಿಫಾರಸ್ಸನ್ನು ಕೇಂದ್ರ ವಿತ್ತ ಸಚಿವಾಲಯ ಅಂಗೀಕರಿಸಬೇಕು ಮತ್ತು ಪೆನ್ಶನ್ ಅಪ್ಡೇಶನನ ಕುರಿತು ನಿರ್ಣಯಗಳನ್ನು ಸಭೆಯ ಮುಂದೆ ಸಂಘಟನೆಯ ಅಧ್ಯಕ್ಷ ಕೆ.ರಾಘವೇಂದ್ರ ಭಟ್ ಮಂಡಿಸಿದರು. ಬಳಿಕ ಈ ಕುರಿತ ಮನವಿಯನ್ನು ಎಲ್ಲೈಸಿ ವಿಭಾಗಾಧಿ ಕಾರಿಗಳಿಗೆ ಸಲ್ಲಿಸಲಾಯಿತು.
ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಬಾಕರ ಬಿ.ಕುಂದರ್ ಉಪಸ್ಥಿತರಿದ್ದರು. ಎ.ಮಧ್ವರಾಜ ಬಲ್ಲಾಳ್ ವಂದಿಸಿದರು.