ಮತದಾನ ಕೇಂದ್ರಗಳ ಬಳಿ ಕೋವಿಡ್ ನಿಯಮಗಳ ಉಲ್ಲಂಘನೆ
ವಿಧಾನಸಭಾ ಉಪಚುನಾವಣೆ
ಬೆಂಗಳೂರು, ನ. 3: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಪ್ರಚಾರದಲ್ಲಿ ಯಾವ ರೀತಿಯಲ್ಲಿ ಕೋವಿಡ್ ನಿಯಮಗಳ ಪಾಲನೆ ಆಗಿರಲಿಲ್ಲವೋ ಅದೇ ಸ್ಥಿತಿ ಮತದಾನ ಕೇಂದ್ರದ ಬಳಿಯೂ ಇಂದು ಗೋಚರಿಸಿತು.
ಉಪ ಚುನಾವಣೆ ಪ್ರಚಾರ ಆರಂಭವಾದ ದಿನದಿಂದಲೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರಚಾರಕ್ಕೆ ತೆರಳಿದ ಸ್ಥಳಗಳಲ್ಲೆಲ್ಲ ಅಪಾರ ಸಂಖ್ಯೆಯ ಕಾರ್ಯಕರ್ತರು ಜಮಾವಣೆಗೊಂಡು ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದರು. ಸುರಕ್ಷಿತ ಅಂತರ ಹಾಗೂ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದೆ ಪ್ರಚಾರದಲ್ಲಿ ತೊಡಗಿದ್ದು ಕಂಡುಬಂದಿತ್ತು. ಇಂದೂ ಸಹ ಮತಗಟ್ಟೆಯಿಂದ 100 ಅಡಿ ಆಚೆ ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರನ್ನು ಮನವೊಲಿಸುವ ದೃಶ್ಯ ಕಂಡುಬಂದಿತು.
ಈ ಸಂದರ್ಭ ಕಾರ್ಯಕರ್ತರ ನಡುವೆ ಸುರಕ್ಷಿತ ಅಂತರವಾಗಲಿ, ಸರಿಯಾಗಿ ಮಾಸ್ಕ್ ಧರಿಸಿರುವುದಾಗಲಿ ಕಂಡುಬರಲಿಲ್ಲ. ಗುಂಪು ಗುಂಪಾಗಿ ನಿಂತು ಜನರ ಮನವೊಲಿಸುವ ಪ್ರಯತ್ನದಲ್ಲಿ ಹೆಚ್ಚಿನವರು ತೊಡಗಿದ್ದರು. ಮತದಾನ ಕೇಂದ್ರದೊಳಗೆ ಚುನಾವಣಾ ಸಿಬ್ಬಂದಿ ಹಲವು ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ, ಹೊರಭಾಗದಲ್ಲಿ ಕೋವಿಡ್ ನಿಯಮಾವಳಿಗಳ ಪಾಲನೆ ಸಮರ್ಪಕವಾಗಿ ಆಗಲಿಲ್ಲ. ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಾರ್ಯಕರ್ತರು ಹಾಗೂ ನಾಗರಿಕರಿಗೆ ಎಚ್ಚರಿಕೆ ನೀಡುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಚುನಾವಣೆ ಪ್ರಕ್ರಿಯೆ ಆರಂಭವಾದ ದಿನದಿಂದಲೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನ ಸಮಸ್ಯೆ ಇಲ್ಲವೇನೋ ಎನ್ನುವ ಭಾವನೆ ಮೂಡುವಂತಾಗಿದೆ. ಇಂದು ಮತಗಟ್ಟೆ ಬಳಿಯೂ ಇದು ಮರುಕಳಿಸಿದ್ದು ವಿಪರ್ಯಾಸ. ಹಲವರು ಹಿರಿಯ ನಾಗರಿಕರು ಹಾಗೂ ಮಕ್ಕಳೊಂದಿಗೆ ಪಾಲಕರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ್ದು, ಸಾಂಕ್ರಾಮಿಕ ರೋಗ ಹರಡುವ ಆತಂಕದಲ್ಲಿಯೇ ಎಲ್ಲರೂ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.