ಮಂಗಳೂರು ಕೆಎಸ್ಸಾರ್ಟಿಸಿ ಡಿಸಿ ವರ್ಗಾವಣೆಗೆ ಸಿಎಂಗೆ ಮನವಿ
ಉಡುಪಿ, ನ. 5: ಮಂಗಳೂರು ಕೆಎಸ್ಸಾರ್ಟಿಸಿ ಡಿಸಿ ಅರುಣ್ ಅವರು ನೌಕರರಿಗೆ ಅನಗತ್ಯ ಕಿರುಕುಳ, ಮಾನಸಿಕ ಹಿಂಸೆ ನೀಡುತಿದ್ದು, ಲಂಚಕ್ಕಾಗಿ ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಅಲ್ಲಿಂದ ವರ್ಗಾವಣೆ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.
ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದಾಗ ಇವರ ಮೇಲೆ ಹಲವು ಆರೋಪಗಳಿದ್ದು, ಅಲ್ಲಿಯ ತನಿಖೆ ಪ್ರಗತಿಯಲ್ಲಿದೆ. ಈ ಭ್ರಷ್ಟ ಅಧಿಕಾರಿಯನ್ನು ಮಂಗಳೂರಿಗೆ ವರ್ಗಾಯಿಸಿ ಇಲ್ಲೂ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಈಗ ಹುಬ್ಬಳ್ಳಿ ವಿಭಾಗಕ್ಕೆ ಅವರನ್ನು ವರ್ಗಾಯಿಸಿದ್ದರೂ, ಇಲ್ಲಿಂದ ತೆರಳದೇ ಇಲ್ಲಿ ಉಳಿದಿರುವುದು ದುರದೃಷ್ಟಕರ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಯ ಶಾಸಕರು, ಸಚಿವರು ಇಂತಹ ಭ್ರಷ್ಟ ಅಧಿಕಾರಿಯನ್ನು ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ ಎಂದಿರುವ ರಮೇಶ್ ಕೋಟ್ಯಾನ್ ಕೂಡಲೇ ಇವರನ್ನು ಈ ಸ್ಥಾನದಿಂದ ಬಿಡುಗಡೆಗೊಳಿ ಸಬೇಕು ಎಂದಿದ್ದಾರೆ.
ಅರುಣ್ರಂಥ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಮಂಗಳೂರಿನಿಂದ ವರ್ಗಾಯಿಸದಿದ್ದರೆ ದಲಿತ ಸಂಘಟನೆಗಳು, ಇತರ ಜಿಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿರುವ ಅವರು, ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.