ಪ್ರವಾದಿ ಮಹಮ್ಮದ್ರ ಜೀವನ -ಸಂದೇಶ ಕಾರ್ಯಕ್ರಮ
ಬ್ರಹ್ಮಾವರ, ನ.7: ಇಸ್ಲಾಮ್ ಎಂಬುದು ಒಂದು ಜೀವನ ಕ್ರಮ. ಇಲ್ಲಿ ಎಲ್ಲಿಯೂ ಹಿಂಸೆಯನ್ನು ಬೋದಿಸಿಲ್ಲ. ಜನರ ಸೊತ್ತು ಮತ್ತು ಜೀವಕ್ಕೆ ರಕ್ಷಣೆ ನೀಡಬಲ್ಲ ವ್ಯಕ್ತಿಯೇ ರಾಜನಾಗಬಹುದು ಎಂದು ಚೊಕ್ಕಬೆಟ್ಟು ಜುಮಾ ಮಸೀದಿ ಇಮಾಮ್ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬ್ರಹ್ಮಾವರ ತಾಲೂಕು ವತಿಯಿಂದ ಶುಕ್ರವಾರ ಬ್ರಹ್ಮಾವರ ಸಿಟಿ ಸೆಂಟರ್ನ ಚಂದನ ಸಭಾಂಗಣದಲ್ಲಿ ಆಯೋಜಿಸಲಾದ ಪ್ರವಾದಿ ಮಹಮ್ಮದ್ರ ಜೀವನ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಬ್ರಹ್ಮಾವರ ಎಸ್ಎಂಎಸ್ ಚರ್ಚ್ನ ಧರ್ಮಗುರು ಫಾ.ಲಾರೆನ್ಸ್ ಡೆವಿಡ್ ಕ್ರಾಸ್ತಾ ಮಾತನಾಡಿ, ಎಲ್ಲಾ ಧರ್ಮಗಳು ಮತ್ತು ಯುಗ ಪುರುಷರು ಉತ್ತಮ ಸಂದೇಶವನ್ನು ನೀಡಿದ್ದಾರೆ. ಅದನ್ನು ಮಾನವರಾದ ನಾವು ಬದುಕಿನಲ್ಲಿ ಅಳವಡಿಸಿಕೊಂಡು ಜೀವಿಸಬೇಕು ಎಂದರು.
ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಮಹಮದ್ ಯಾಸೀನ್ ಮಲ್ಪೆ, ಲೆಕ್ಕ ಪರಿಶೋಧಕ ಇಸಾಕ್ ಪೂತ್ತೂರು, ವಿವಿಧ ಸಂಘಟನೆಯ ಮುಖಂಡರಾದ ನಿತ್ಯಾನಂದ ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ಶ್ಯಾಮರಾಜ್ ಬಿರ್ತಿ, ಶಂಕರ ಕುಂದರ್, ನರೇಂದ್ರ ಕುಮಾರ್ ಕೋಟ ಮೊದಲಾದವರು ಉಪಸ್ಥಿತರಿದ್ದರು.
ಮೌಲಾನಾ ಇಮ್ದಾದುಲ್ಲಾಹ್ ಖಾನ್ ಕುರಾನ್ ಪಠಣ ಮಾಡಿದರು. ಅಸ್ಲಾಂ ಹೈಕಾಡಿ ಅನುವಾದಿಸಿದರು. ಬ್ರಹ್ಮಾವರ ತಾಲೂಕು ಒಕ್ಕೂಟದ ಅಧ್ಯಕ್ಷ ಇಬ್ರಾಹಿಮ್ ಸಾಹೇಬ್ ಕೋಟ ಸ್ವಾಗತಿಸಿದರು. ತಾಜುದ್ದೀನ್ ವಂದಿಸಿದರು. ಮುಹಮ್ಮದ್ ಅರಝಾದ್ ಕಾರ್ಯಕ್ರಮ ನಿರೂಪಿಸಿದರು.